ADVERTISEMENT

ಕನಕಗಿರಿ: ಐಫೋನ್‌ನಿಂದ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಶಾಸಕರ ಪುತ್ರ

ಶಾಸಕರ ಪುತ್ರನ ಸಂಭ್ರಮ: ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 23:02 IST
Last Updated 2 ಸೆಪ್ಟೆಂಬರ್ 2021, 23:02 IST
ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ಧಡೇಸುಗೂರು ಅವರ ಪುತ್ರ ಸುರೇಶ ಐಫೋನ್‌ ಮೊಬೈಲ್‌ ಮೂಲಕ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ದೃಶ್ಯ
ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ಧಡೇಸುಗೂರು ಅವರ ಪುತ್ರ ಸುರೇಶ ಐಫೋನ್‌ ಮೊಬೈಲ್‌ ಮೂಲಕ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ದೃಶ್ಯ   

ಕೊಪ್ಪಳ:ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಧಡೇಸುಗೂರು ಅವರ ಪುತ್ರಸುರೇಶ ದುಬಾರಿ ಐಫೋನ್‌ ಕಂಪನಿಯ ಮೊಬೈಲ್‌ನಿಂದ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ವಿಡಿಯೊ ವೈರಲ್‌ ಆಗಿದೆ.

ಶಾಸಕರ ಎರಡನೇ ಪುತ್ರ ಸುರೇಶ, ಕನಕಗಿರಿ ಮತ್ತು ಕಾರಟಗಿಯ ತಮ್ಮ ಸ್ನೇಹಿತರ ಜೊತೆಗೆ ಬಿಎಂಡಬ್ಲ್ಯೂದುಬಾರಿ ಕಾರಿನಲ್ಲಿ ಜಾಲಿ ರೈಡ್‌ ಮಾಡಿ ಹೊಸಪೇಟೆಯಲ್ಲಿ 'ಸುರೇಶ ಧಡೇಸುಗೂರು' ಎಂದು ಹೆಸರು ಬರೆದಿದ್ದ ಎಂಟು ಕೇಕ್‌ಗಳನ್ನು ಮೊಬೈಲ್‌ನಿಂದ ಕತ್ತರಿಸಿ ಸಂಭ್ರಮಿಸಿರುವುದು ವಿಡಿಯೊದಲ್ಲಿದೆ.

‘ಇದು ಶ್ರೀಮಂತಿಕೆಯ ಪ್ರದರ್ಶನ. ಕೊರೊನಾ ಕಾಲದಲ್ಲಿ ಜನರು ಸಂಕಷ್ಟದಲ್ಲಿ ಇರುವಾಗ ಆಡಂಬರ ಪ್ರದರ್ಶನ ಮಾಡುವ ಮೂಲಕ ಕ್ಷೇತ್ರದ ಜನತೆಗೆ ಶಾಸಕರ ಕುಟುಂಬ ದ್ರೋಹ ಬಗೆಯುತ್ತಿದೆ' ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ADVERTISEMENT

‘ಎರಡು ಸಾರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಸವರಾಜ, ಅನುಕಂಪ ಗಿಟ್ಟಿಸಲು ನಾನು ಬಡವ, ಚುನಾವಣೆಗೆ ಹಣವಿಲ್ಲ ಎಂದು ಜನರ ಬಳಿ ದವಸ, ಧಾನ್ಯ, ಕುರಿ, ಕೋಳಿದೇಣಿಗೆ ಎತ್ತುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಆಡಂಬರದ ಬದುಕು ಈಗ ಬಯಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಶಾಸಕರ ಇನ್ನೊಬ್ಬ ಪುತ್ರ ಮೌನೇಶ, ಕ್ಷೇತ್ರದಲ್ಲಿ ಎಲ್ಲ ಪಂಚಾಯಿತಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದರು’ ಎಂದೂ ಅವರು ದೂರಿದ್ದಾರೆ.

ಸಮರ್ಥನೆ:ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಬಸವರಾಜ ಧಡೇಸುಗೂರು, ‘ಕೊರೊನಾ ಸಂದರ್ಭದಲ್ಲಿ ಕೈಯಿಂದ ಕೇಕ್‌ ಕತ್ತರಿಸಿದೇ ಮೊಬೈಲ್‌ ಬಳಸಿದ್ದಾರೆ. ಅದರಲ್ಲಿ ತಪ್ಪೇನು? ನನ್ನ ಮಕ್ಕಳು ಯಾರ ತಲೆ ಒಡೆದು ಸಂಪಾದಿಸಿಲ್ಲ. ಅವರು ದುಡಿದು ಸಂಪಾದಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.