ADVERTISEMENT

ಕಾರಟಗಿ | ಹೊಸ ಅಧ್ಯಕ್ಷರಿಗೆ ಹಳೆ ಸಮಸ್ಯೆಗಳೇ ಸವಾಲು

ಕೆ.ಮಲ್ಲಿಕಾರ್ಜುನ
Published 26 ಜನವರಿ 2026, 7:28 IST
Last Updated 26 ಜನವರಿ 2026, 7:28 IST
ಕಾರಟಗಿಯ ಕೆರೆಯ ಭಾಗದಲ್ಲಿ ಸ್ವಚ್ಚತೆ, ದಾರಿ ಇರದ ಸಾರ್ವಜನಿಕ ಶೌಚಾಲಯ
ಕಾರಟಗಿಯ ಕೆರೆಯ ಭಾಗದಲ್ಲಿ ಸ್ವಚ್ಚತೆ, ದಾರಿ ಇರದ ಸಾರ್ವಜನಿಕ ಶೌಚಾಲಯ   

ಕಾರಟಗಿ: ಪಟ್ಟಣದ ಪುರಸಭೆಗೆ ಚುನಾವಣೆ ನಡೆದರೂ ವರ್ಷದ ಬಳಿಕ ಜನಪ್ರತಿನಿಧಿಗಳಿಗೆ ಅಧಿಕಾರ ದೊರೆತಿತ್ತು. ಮೊದಲ ಅವಧಿಯ ಉಳಿದ ಅರ್ಧ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಜ. 21ರಂದು ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಅಧ್ಯಕ್ಷರು ಹಳೆ ಸಮಸ್ಯೆಗಳ ಜೊತೆಗೆ ಹೊಸ ಸವಾಲುಗಳಿಗೆ ಪರಿಹಾರ ಒದಗಿಸಬೇಕಾಗಿದೆ. 

ಅನೇಕ ವರ್ಷಗಳಿಂದ ಮನೆಗಳ ಮಂಜೂರು ಎಂಬುದು ಕನಸಾಗಿದೆ. ಕಾಲುವೆಯ ಮೇಲೆ, ಬಯಲು ಜಾಗೆಯಲ್ಲಿ, ಸರ್ಕಾರಿ ಕಚೇರಿ ಮುಂಭಾಗದಲ್ಲಿ ನಿರ್ಗತಿಕರು ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ನಿವೇಶನಕ್ಕೆಂದು ಅರ್ಜಿ ಪಡೆಯುವುದೇ ಇಲ್ಲಿಯವರೆಗೆ ನಡೆದುದನ್ನು ಬಿಟ್ಟರೆ ಬೇರೇನೂ ಬೆಳವಣಿಗೆ ಆಗಿಲ್ಲ.

ಪಟ್ಟಣದ ಜನಸಂಖ್ಯೆ ಬೆಳೆಯುತ್ತಲೇ ಇದ್ದು, ಕಸ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದೆ. ಪೌರಕಾರ್ಮಿಕರು ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದರೂ ಕೆರೆಯ ಸ್ಥಳದಲ್ಲೇ ವಿಲೇವಾರಿ ಮಾಡಲಾಗುತ್ತಿದೆ. ಆಗಾಗ ತ್ಯಾಜ್ಯಕ್ಕೆ ಬೆಂಕಿ ಹತ್ತಿ ನಿರಂತರವಾಗಿ ಹೊಗೆ ಸೂಸುತ್ತಾ, ಜನರು ಆರೋಗ್ಯ ಭೀತಿಯಿಂದ ದಿನಗಳೆಯುತ್ತಿದ್ದಾರೆ.

ADVERTISEMENT

ರಸ್ತೆಯ ರಾಜ ಜಾನುವಾರು: ಜಾನುವಾರುಗಳು ಮುಖ್ಯರಸ್ತೆಯ ಮೇಲೆಯೇ ‘ರಾಜಾ’ಗಳಾಗಿ ಸಂಚಾರಕ್ಕೆ, ಅಪಘಾತಕ್ಕೆ ಕಾರಣವಾಗುತ್ತಿದೆ. ಸ್ಥಳೀಯ ಆಡಳಿತ ಆಗಾಗ ಧ್ವನಿವರ್ಧಕದ ಮೂಲಕ ಜಾನುವಾರು ಮಾಲೀಕರಿಗೆ ಎಚ್ಚರ ನೀಡುವುದು, ಕೆಲವು ಬಾರಿ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸುವುದು ಬಿಟ್ಟರೆ ಸಮಸ್ಯೆಗೆ ಇಂದಿಗೂ ಪರಿಹಾರ ದೊರೆತಿಲ್ಲ.

ಪ್ಲಾಸ್ಟಿಕ್‌ ಬಳಕೆ ಮಿತಿ ಮೀರಿದ್ದು ರಸ್ತೆ, ಚರಂಡಿಗಳಲ್ಲಿ ರಾಜಾಜಿಸುತ್ತಾ, ಸ್ವಚ್ಛತೆಗೆ ಅಡ್ಡಿಯಾಗಿದೆ. ದಾಳಿ ಮಾಡಿ ಕೈಚೆಲ್ಲಿ ಕೂಡುವುದು ಪುರಸಭೆಯ ಜಾಯಮಾನವಾಗಿದೆ. ಪ್ಲಾಸ್ಟಿಕ್‌ ಬಳಕೆಯ ಬಗ್ಗೆ ದಾಳಿ, ದಂಡ ವಿಧಿಸುವುದು, ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆದಿದೆಯಾದರೂ, ಜನರ ಮನೋಸ್ಥಿತಿ ಬದಲಾಗಿಲ್ಲ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮುಖ್ಯರಸ್ತೆಯಲ್ಲಿ ಸಂಗ್ರಹವಾಗುವ ಮಣ್ಣು, ವಾಹನಗಳ ಓಡಾಟದಿಂದ ಎದ್ದೇಳುವ ದೂಳು ವ್ಯಾಪಾರಿಗಳ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. 

ಬೈಪಾಸ್‌ ರಸ್ತೆ: ಮುಖ್ಯರಸ್ತೆಯ ಅತಿಕ್ರಮಣ, ಜನರ, ವಾಹನಗಳ ದಟ್ಟಣೆ ಅಧಿಕವಾಗಿದ್ದರೂ ಬೈಪಾಸ್‌ ರಸ್ತೆಯ ಯೋಜನೆ ಜಾರಿಯಾಗದೇ ದಶಕಗಳೆ ಕಳೆದಿದೆ. ದೂಳುಮುಕ್ತ ಕೇವಲ ಘೋಷಣೆ, ಬೈಪಾಸ್ ರಸ್ತೆ ಇಂದಿಗೂ ಮರೀಚಿಕೆಯಾಗಿದೆ.
ಗ್ರಾಮೀಣ ಸಂತೆ ಮೈದಾನದಿಂದ ಲಕ್ಷಾಂತರ ಆದಾಯವಿದ್ದರೂ ಅಗತ್ಯ ಸೌಕರ್ಯಗಳ ಕೊರತೆ ಕಾಡುತ್ತಿದೆ. ಅಸಹಾಯಕರಾಗಿ ವರ್ತಕರು, ಗ್ರಾಹಕರು ವ್ಯಾಪಾರ ಪ್ರಕ್ರಿಯೆ ಮುಗಿಸಬೇಕಿದೆ. ಮುಂಭಾಗದ ರಸ್ತೆಯಲ್ಲೂ ಸಂತೆ ನಡೆದು ಸಂಚಾರಕ್ಕೆ, ವಾಹನ ನಿಲುಗಡೆಗೆ ಸಮಸ್ಯೆಯಾಗಿದೆ.

ಸುಂದರ ಪಟ್ಟಣದ ಘೋಷಣೆ ನಡೆಯುತ್ತಿದೆ. ಆದರೂ ಪುರಸಭೆ ಹಸಿರೀಕರಣ ಕಾರ್ಯಕ್ರಮ ಆರಂಭಿಸಿ ಅನೇಕ ಕಡೆ ಸಸಿಗಳನ್ನು ನೆಟ್ಟಿದೆ. ಬೆಳೆದ ಪಟ್ಟಣಕ್ಕೆ ಪುರಸಭೆಯ ಪರಿಸರ ಪ್ರೇಮವು ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಬಾಗಿದ ಸಸಿಗಳಿಗಳಿಗೆ ರಕ್ಷಣೆ ಇರದೇ ರಸ್ತೆಗೇ ಚಾಚಿಕೊಂಡು ಅನೇಕ ಕಡೆ ನೆಟ್ಟ ಸಸಿಗಳು ನಾಶವಾಗಿವೆ.

ರಾಜೀವಗಾಂಧಿ ಕುಡಿಯುವ ನೀರಿನ ಕೆರೆ, ಕೊಳವೆಬಾವಿ ಬಿಟ್ಟರೆ ಬೇರಾವ ಶಾಶ್ವತವಾದ ಜಲಮೂಲಗಳಿಲ್ಲ. ಬೇಸಿಗೆ ಸಮಯದಲ್ಲಿ ಟ್ಯಾಂಕರ್‌ ನೀರನ್ನು ಕೆಲ ವಾರ್ಡ್‌ಗಳ ಜನರು ಅವಲಂಭಿಸಬೇಕಿದೆ. ಸಮರ್ಥವಾಗಿ ನೀರು ಪೂರೈಕೆ ಮಾಡುವಲ್ಲಿ ಕಳೆದ ಬೇಸಿಗೆಯಲ್ಲಿ ಅಧಿಕಾರಿಗಳ ಪ್ರಯತ್ನಗಳ ಮಧ್ಯೆಯೂ ವಿಫಲತೆ ಎದ್ದು ಕಾಣುತ್ತಿತ್ತು. ಹೀಗೆ ಪಟ್ಟಣದ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಉಳಿದ ಸದಸ್ಯರ, ಅಧಿಕಾರಿಗಳ ಸಹಕಾರ ಪಡೆದು, ಇಚ್ಚಾಶಕ್ತಿ ಮೆರೆದು, ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಮುಂದಾಗಬೇಕಿದೆ.
 

ಕಾರಟಗಿಯ 7ನೇ ವಾರ್ಡ್‌ನಲ್ಲಿ ವ್ಯಾಪಾರಿ ಮಳಿಗೆ ಶೌಚಾಲಯವಾಗಿ ಬಳಕೆಯಾಗುತ್ತಿರುವುದು