
ಕೊಪ್ಪಳ: ‘ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಡೆಯುತ್ತಿರುವ ಉಹಾಪೋಹದ ಚರ್ಚೆಗಳಿಂದಾಗಿ ಆಡಳಿತ ಮೇಲೆ ಪರಿಣಾಮ ಬೀರುತ್ತದೆ. ಪಕ್ಷದ ಹಿತದೃಷ್ಟಿಯಿಂದ ಎರಡು ದಿನಗಳಲ್ಲಿ ಇದಕ್ಕೆ ತೆರೆ ಬೀಳಲಿದೆ’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
‘ನಾಲ್ಕು ಗೋಡೆಗಳ ನಡುವೆ ನಡೆದ ಚರ್ಚೆಯ ಬಗ್ಗೆ ನನಗೆ ಗೊತ್ತಿಲ್ಲ. ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾವುದೇ ಷರತ್ತು ಅಥವಾ ಒಪ್ಪಂದದ ಬಗ್ಗೆ ನಮ್ಮ ಮುಂದೆ ಯಾರೂ ಹೇಳಿಲ್ಲ’ ಎಂದು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ ಅವರು ‘ಮುಖ್ಯಮಂತ್ರಿ ಆಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಎಲ್ಲಿಯಾದರೂ ಹೇಳಿದ್ದಾರೆಯೇ’ ಎಂದು ಪ್ರಶ್ನಿಸಿದರು.
ಶಿವಕುಮಾರ್ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ‘ಅತಿಯಾದ ಆತ್ಮವಿಶ್ವಾಸವಿರುವ ವ್ಯಕ್ತಿಗಳು ಕೆಲವರಿರುತ್ತಾರೆ. ಅದರಲ್ಲಿ ಅವರೂ ಒಬ್ಬರು. ಡಿಕೆಶಿಗೆ ಅಪಾರವಾದ ದೇವರ ಬಗ್ಗೆ ನಂಬಿಕೆಯಿದೆ. ಅದಕ್ಕಾಗಿ ಅವರು ದೇವಸ್ಥಾನಕ್ಕೆ ಹೋಗುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ’ ಎಂದರು.
‘ಸಚಿವ ಸಂಪುಟ ವಿಸ್ತರಣೆಯಾದರೆ ನನ್ನನ್ನು ಸಚಿವರನ್ನಾಗಿ ಮಾಡುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಅವಕಾಶವಿದ್ದರೆ ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ನನಗೆ ಮುಖ್ಯಮಂತ್ರಿಯಾಗುವ, ಪ್ರಧಾನಿಯಾಗುವ ಕನಸು ಕೂಡ ಇದೆ. ಯಾರಿಗೆ ಆಸೆ ಇರುವುದಿಲ್ಲ. ನಮ್ಮ ಆಸೆಗೆ ತಕ್ಕಂತೆ ಎಲ್ಲವೂ ಆಗುತ್ತವೆಯೇ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.