ಕಾರಟಗಿ: ಮಕ್ಕಳಿಗೆ ಹತ್ತಾರು ಸಾವಿರ ಮೊತ್ತದ ಮೊಬೈಲ್ ಕೊಡಿಸಿ, ಅದರ ದುರುಪಯೋಗಕ್ಕೆ ಆಸ್ಪದ ನೀಡದೇ ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಪಾಲಕರು ಮುಂದಾಗಬೇಕು. ಈಚಿನ ದಿನಗಳಲ್ಲಿ ಮೊಬೈಲ್ನ್ನು ಯುವಕರು ಸದ್ವಿನಿಯೋಗಕ್ಕಿಂತ ಮಿಗಿಲಾಗಿ ಜ್ಞಾನ, ತಿಳಿವಳಿಕೆ, ಆತ್ಮವಿಶ್ವಾಸದಿಂದ ವಿಮುಖರಾಗುವ ರೀತಿಯಲ್ಲಿ ಬಳಸುತ್ತಿರುವುದು ಕಳವಳಕಾರಿ ಸಂಗತಿ. ಕಸಾಪ ಓದುವ ಗೀಳು ಹೆಚ್ಚಿಸಲು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಶಿಧರಸ್ವಾಮಿ ಹೇಳಿದರು.
ಪಟ್ಟಣದ ಜೆಪಿ ನಗರದ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕಸಾಪ ತಾಲ್ಲೂಕು ಘಟಕ ಕನ್ನಡ ಕಾರ್ತಿಕೋತ್ಸವದ ನಿಮಿತ್ತ ಗುರುವಾರ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ಕನ್ನಡದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.
ಪುಸ್ತಕಗಳ ಓದಿನಿಂದ ಮಕ್ಕಳಲ್ಲಿ ಭಾಷಾ ಜ್ಞಾನ, ಪದಗಳ ಪರಿಚಯ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಯುವುದು. ನೈತಿಕತೆ, ಸೃಜನಶೀಲತೆ ಮತ್ತು ಪ್ರಬುದ್ಧತೆ ಅರಳಲು ಸಾಧ್ಯವಾಗುತ್ತದೆ. ಯಾವುದೇ ವಿಷಯದ ಬಗ್ಗೆ ವಿಶ್ಲೇಷಿಸುವ, ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಬೆಳೆದು, ಭಾಷಾಪ್ರೇಮ ಹೆಚ್ಚುವುದು. ಯುವ ಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸರ್ದಾರ ಅಲಿ ಮಾತನಾಡಿ, ಕಸಾಪ ಗ್ರಾಮೀಣ ಭಾಗದಲ್ಲಿ ಚಟುವಟಿಕೆಗಳನ್ನು ವಿಸ್ತರಿಸುವ ವೇದಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ, ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶರಣಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್ಪಿ ಭೀಮಣ್ಣ ಕರಡಿ, ಮುಖ್ಯಗುರು ರಮೇಶ ಕುಕನೂರ, ಮಲ್ಲಿಕಾರ್ಜುನ ಯತ್ನಟ್ಟಿ, ಶಿಕ್ಷಕರು ಪಾಲ್ಗೊಂಡಿದ್ದರು. ಕಸಾಪ ಪ್ರಧಾನ ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ, ಶಿಕ್ಷಕಿ ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.