ಕೊಪ್ಪಳ: ಕನ್ನಡ ನಾಡು ನುಡಿ ಭಾಷೆ ನೆಲ ಜಲ ಸಂರಕ್ಷಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಹಾಗೂ ಅಭಿನಂದನಾರ್ಹ ಎಂದು ಸಾಹಿತಿ ಈಶ್ವರ ಹತ್ತಿ ಹೇಳಿದರು.
ನಗರದತಾಲೂಕ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರಕಸಾಪ108ನೇ ಸಂಸ್ಥಾಪನಾ ದಿನಾಚರಣೆ ಹಾಗೂತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ2021 ರಿಂದ 2026ರವರೆಗಿನ ಅವಧಿಯ ಕಸಾಪ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ನಾಡು, ನುಡಿ ಸೇವೆಯಲ್ಲಿ ಕಸಾಪ ಕಾರ್ಯ ಇಂದಿನ ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಮುಕ್ತವಾಗುವುದು ಉತ್ತಮ. ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಅಪಾರ ಪ್ರಭಾವ ಬೀರಿದೆ ಎಂದರು.
ಪತ್ರಕರ್ತ ಚಾಮರಾಜ ಸವಡಿ ಉಪನ್ಯಾಸ ನೀಡಿ,ಕನ್ನಡ ನಾಡಿನಲ್ಲಿ ಕನ್ನಡ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯತ್ವ ಪಡೆಯಲು ಕೆಲವೊಂದು ತಿದ್ದುಪಡಿಗಳನ್ನು ತರುವುದು ತರವಲ್ಲ. ಪ್ರತಿಯೊಬ್ಬ ಕನ್ನಡಿಗನು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಪಡೆಯಲು ಅರ್ಹ ಎಂದರು.
ಕೇಂದ್ರ ಕಸಾಪ ಪ್ರತಿನಿಧಿ ನಬೀಸಾಬ್ ಕುಷ್ಟಗಿಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಜೊತೆಗೆ ರಾಜ್ಯದ ಮೂಲೆಮೂಲೆಗಳಲ್ಲೂ ಶಿಕ್ಷಣ ಸೇವೆಯ ಜೊತೆಗೆ ಕನ್ನಡನಾಡಿನ ಸೇವೆಯನ್ನು ಕೂಡ ಸಾಹಿತ್ಯ ಪರಿಷತ್ತಿನ ಮೂಲಕ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ,ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಗ್ರಾಮದ ಮೂಲೆಮೂಲೆಗಳಲ್ಲೂ ತಲುಪಿಸುವುದು ಆದ್ಯ ಕರ್ತವ್ಯವಾಗಿದ್ದು, ಹೋಬಳಿ ಮತ್ತು ತಾಲ್ಲೂಕು ಘಟಕದ ಮೂಲಕ ಈ ಕಾರ್ಯ ನಡೆಯುವಂತೆ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿದರು.
ಶರಣ ಬಸವನಗೌಡ ಪಾಟೀಲ್, ಮಂಜುನಾಥ್ ಬಿ, ಪ್ರಾಣೇಶ್ ಪೂಜಾರ್, ಎಸ್.ಎಂ.ಕಂಬಾಳಿಮಠ, ಎಸ್.ಬಿ ಗೊಂಡಬಾಳ, ಪುಷ್ಪಲತಾ ಏಳುಬಾವಿ, ಶರಣಪ್ಪ ಬಾಚಲಾಪುರ, ಮಾರ್ತಾಂಡ ರಾವ್ ದೇಸಾಯಿ, ರಮೇಶ್ ಕುಲಕರ್ಣಿ, ಡಿ.ಎಂ.ಬಡಿಗೇರ್, ತೋಟಪ್ಪ ಕಾಮನೂರು, ವೀರೇಶ್ ಸಜ್ಜನ್, ಶೇಖರಗೌಡ ಕುದುರಿಮೋತಿ, ಸಾವಿತ್ರಿ ಮುಜುಂದಾರ್, ರಾಮಚಂದ್ರಗೌಡ ಗೊಂಡಬಾಳ, ಹೇಮಣ್ಣ ಕವಲೂರ ಇದ್ದರು.
ಶ್ರೀಶೈಲ್ ಬಡಿಗೇರ್ ಮತ್ತು ತಂಡದವರಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಗಪ್ಪ ಚಕ್ರಸಾಲಿ ನಿರೂಪಿಸಿದರು. ಮಲ್ಲಿಕಾರ್ಜುನ್ ಹ್ಯಾಟಿ ಸ್ವಾಗತಿಸಿದರು. ಬಸವರಾಜ್ ಶಿರಗುಂಪಿ ಶೆಟ್ಟರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.