ಕೊಪ್ಪಳ: ‘ಸಮಾಜದಲ್ಲಿ ಪ್ರತಿ ಕುಟುಂಬದ ಮಹಿಳೆಯರು ಸಸ್ಯ ಸಂಪತ್ತಿನ ಬಗ್ಗೆ ಅರಿತು ಅವುಗಳಿಂದ ಆಗುವ ಪ್ರಯೋಜನ ತಿಳಿದುಕೊಂಡು ಆರೋಗ್ಯಯುತ ಜೀವನ ನಡೆಸಬೇಕು’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ನಗರದಲ್ಲಿ ಈಚೆಗೆ ನಡೆದ ‘ಮನೆಮದ್ದು ಹಾಗೂ ಪರಸ್ಪರ ಸಂಬಂಧಗಳ ನಿರ್ವಹಣೆ’ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ಕುಟುಂಬದಲ್ಲಿ ಮಹಿಳೆ ಆರೋಗ್ಯ ವಿಷಯದ ಬಗ್ಗೆ ಅರಿತರೆ ಇಡೀ ಕುಟುಂಬ ಆರೋಗ್ಯ ಪೂರ್ಣವಾಗಿರುತ್ತದೆ. ಈ ಮೂಲಕ ಸಮಾಜದಲ್ಲಿ ಅನೇಕ ರೀತಿಯ ಜಾಗೃತಿ ಕಾರ್ಯಕ್ರಮಗಳು ಮೂಡಿಬರುತ್ತವೆ’ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಮುರಳೀಧರ ಗುಂತೂರು ಮಾತನಾಡಿ ‘ಗಿಡಗಳಿಂದ ಅನೇಕ ಪ್ರಯೋಜನಗಳು ಆಗುತ್ತವೆ. ಆಯುರ್ವೇದ ಪದ್ಧತಿಯ ಬಗ್ಗೆ ಹಾಗೂ ಹಿಂದಿನ ಜನರ ಜೀವನ ಶೈಲಿ ಅರಿತುಕೊಳ್ಳಬೇಕಿದೆ’ ಎಂದರು.
ಸಂಘದ ನಿರ್ದೇಶಕ ವಿ.ಎಂ. ಭೂಸನೂರಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಪ್ರಭುರಾಜ್ ಕಲಬುರ್ಗಿ, ವಿಕಾಸ ಅಕಾಡೆಮಿ ವಕೀಲ ರಾಘವೇಂದ್ರ ಪಾನಗಂಟಿ, ಕೊಟ್ರಪ್ಪ ಮುತ್ತಳಾ, ಸಂಚಾಲಕಿ ಗೀತಾ ಪಾಟೀಲ್, ಮಂಜುಳಾ ಕರಡಿ, ವಾಣಿಶ್ರೀ ಮಠ, ಶಾರದಾ ಪಾನಗಂಟಿ, ಕೀರ್ತಿ ಪಾಟೀಲ್ ಅಕಾಡೆಮಿ ಸಂಚಾಲಕ ಸಿದ್ದಾರೆಡ್ಡಿ ಮೈನಳ್ಳಿ, ಮಂಜುನಾಥ ನಾಡಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವಿತರಣೆ: ಇದೇ ವೇಳೆ ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಹಾಗೂ ಕೃಷಿ ಸಾಂಸ್ಕೃತಿಕ ಸಂಘದ ವತಿಯಿಂದ ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ಕಿರು ಉದ್ಯಮ ಘಟಕ ಯೋಜನೆಯಡಿ ಯಂತ್ರಗಳನ್ನು ಸಂಸದ ಸಂಗಣ್ಣ ಕರಡಿ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.