
ಕೊಪ್ಪಳ: ‘ನಿಮ್ಮ ಸ್ನೇಹಿತ ಹ್ಯಾರಿ ರಾಬರ್ಟ್ ಎಂಬುವರು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕುಬಿದ್ದಿದ್ದು ಭಯೋತ್ಪಾದನೆ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡುತ್ತಿದ್ದೇವೆ. ಹಣ ಕೊಡದಿದ್ದರೆ ನಿಮ್ಮನ್ನೂ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ’ ಎಂದು ಇಲ್ಲಿನ ಬ್ಯಾಂಕ್ ಉದ್ಯೋಗಿ ವಿಜಯಕುಮಾರ್ ಗಂಗಲ್ ಅವರನ್ನು ಹೆದರಿಸಿ ಅಪರಿಚಿತರು ಆನ್ಲೈನ್ ಮೂಲಕ ₹21.48 ಲಕ್ಷ ಸುಲಿಗೆ ಮಾಡಿದ್ದಾರೆ.
ಈ ಹಿಂದೆ ವಿಜಯಕುಮಾರ್ ಅವರು ತಮಗಿರುವ ಕುತ್ತಿಗೆ ನೋವಿಗೆ ಚಿಕಿತ್ಸೆ ಬಗ್ಗೆ ಆನ್ಲೈನ್ನಲ್ಲಿ ಹುಡುಕಾಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ವೈದ್ಯರೆಂದು ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ‘ಭಾರತಕ್ಕೆ ಬಂದಾಗ ನಿಮಗಿರುವ ಕುತ್ತಿಗೆ ನೋವಿಗೆ ಚಿಕಿತ್ಸೆ ನೀಡುತ್ತೇವೆ’ ಎಂದು ನಂಬಿಸಿದ್ದಾರೆ. ಇದನ್ನು ನಂಬದ ಅವರಿಗೆ ಬೇರೆ ಬೇರೆ ಫೋನ್ ಸಂಖ್ಯೆಯಿಂದ ಕರೆ ಮಾಡಿ ಭಯೋತ್ಪಾದನೆ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಬೆದರಿಕೆಯೊಡ್ಡಿ ಹಣ ಪಡೆದುಕೊಂಡಿದ್ದಾರೆ.
ಈ ಕುರಿತು ವಿಜಯಕುಮಾರ್ ಅವರ ಪತ್ನಿ ಪ್ರಿಯಾ ನೀಡಿದ ದೂರಿನ ಮೇರೆಗೆ ಇಲ್ಲಿನ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.