ADVERTISEMENT

ಕೊಪ್ಪಳ| ಕಾರ್ಖಾನೆಗಳ ಕಪ್ಪುಕಣಗಳ ದೂಳಿನ ಮಾಲಿನ್ಯ: ಶಾಸಕ ಹಿಟ್ನಾಳಗೆ ಮತ್ತೆ ತರಾಟೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 19:04 IST
Last Updated 26 ಫೆಬ್ರುವರಿ 2026, 19:04 IST
ರಾಘವೇಂದ್ರ ಹಿಟ್ನಾಳ
ರಾಘವೇಂದ್ರ ಹಿಟ್ನಾಳ   

ಕೊಪ್ಪಳ: ಕಾರ್ಖಾನೆಗಳ ಕಪ್ಪುಕಣಗಳ ದೂಳಿನ ಮಾಲಿನ್ಯದಿಂದ ರೋಸಿ ಹೋಗಿರುವ ತಾಲ್ಲೂಕಿನ ಹಿರೇಬಗನಾಳ ಗ್ರಾಮದ ಜನ ತಮ್ಮೂರಿಗೆ ಭೇಟಿ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬುಧವಾರ ಗ್ರಾಮಕ್ಕೆ ತೆರಳಿದ್ದ ಶಾಸಕರಿಗೆ ಗ್ರಾಮಸ್ಥರು, ‘ಕಪ್ಪುದೂಳಿನ ಮಾಲಿನ್ಯದಿಂದ ಸಾಕಾಗಿ ಹೋಗಿದೆ. ನೀವೊಮ್ಮೆ ಗ್ರಾಮದಲ್ಲಿ ಸುತ್ತುಹಾಕಿ, ನಮ್ಮ ಬದುಕು ಹೇಗಾಗಿದೆ ಎನ್ನುವುದು ಗೊತ್ತಾಗುತ್ತದೆ. ಬಜೆಟ್‌ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿಯನ್ನು ನಮ್ಮೂರಿಗೆ ಕರೆದುಕೊಂಡು ಬನ್ನಿ’ ಎಂದು ಒತ್ತಾಯಿಸಿದರು.

‘ಸ್ಪಾಂಜ್‌ ಹಾಗೂ ಐರನ್‌ ಕಾರ್ಖಾನೆಗಳಿಂದ ಸುತ್ತಲಿನ ಪರಿಸರ ಕಲುಷಿತವಾಗಿದೆ. ಮಾಲಿನ್ಯ ಮಾಡದ ಕೈಗಾರಿಕೆಗಳ ಆರಂಭಕ್ಕೆ ನಮ್ಮ ವಿರೋಧವಿಲ್ಲ. ಪರಿಣಿತರ ತಂಡದ ವರದಿ ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಶಾಸಕರೇ ನಮ್ಮನ್ನು ನಡು ನೀರಿನಲ್ಲಿ ಕೈಬಿಟ್ಟು ಹೋಗಬೇಡಿ. ಇಲ್ಲಿನ ಸಮಸ್ಯೆ ನೋಡಬನ್ನಿ’ ಎಂದು‌ ಗ್ರಾಮಸ್ಥರು ಒಕ್ಕೊರಲಿನಿಂದ, ಕೂಗಿದರು. ‘ನಿಮ್ಮ ನಿರ್ಲಕ್ಷ್ಯತನ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.

ಮಾಲಿನ್ಯ ವಿರೋಧಿಸಿ ಫೆ.24ರಂದು ಕೊಪ್ಪಳ ಬಂದ್‌ ವೇಳೆಯೂ   ಗ್ರಾಮಸ್ಥರು ಶಾಸಕ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಹೀಗೆ ತರಾಟೆಗೆ ತೆಗೆದುಕೊಂಡಿದ್ದರು.

ಹಿರೇಬಗನಾಳ ಗ್ರಾಮದ ಮೂರ್ನಾಲ್ಕು ಯುವಕರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡಿದವರು ಒಂದೂ ದಿನ ಹೋರಾಟದಲ್ಲಿ ಭಾಗಿಯಾಗಿಲ್ಲ
ರಾಘವೇಂದ್ರ ಹಿಟ್ನಾಳ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.