ADVERTISEMENT

ಕೊಪ್ಪಳ: ಹಲಸು ಕ್ಷೇತ್ರ ಹೆಚ್ಚಿಸಲು ಮರು ಖರೀದಿ ವ್ಯವಸ್ಥೆ

ಪ್ರಮೋದ ಕುಲಕರ್ಣಿ
Published 17 ಜೂನ್ 2025, 5:23 IST
Last Updated 17 ಜೂನ್ 2025, 5:23 IST
ಕೊಪ್ಪಳ ಜಿಲ್ಲೆಯಲ್ಲಿ ರೈತರಿಗೆ ವಿತರಿಸಲು ಬೆಳೆದಿರುವ ಹಲಸಿನ ಸಸಿಗಳು 
ಕೊಪ್ಪಳ ಜಿಲ್ಲೆಯಲ್ಲಿ ರೈತರಿಗೆ ವಿತರಿಸಲು ಬೆಳೆದಿರುವ ಹಲಸಿನ ಸಸಿಗಳು    

ಕೊಪ್ಪಳ: ಆಹಾರ ಮತ್ತು ಔಷಧ ತಯಾರಿಕೆಗೆ ಹೇರಳವಾಗಿ ಬಳಕೆಯಾಗುವ ಥಾಯ್‌ ಹೈಬ್ರಿಡ್ ತಳಿಯ ಹಲಸಿನ ಹಣ್ಣುಗಳನ್ನು ಬೆಳೆಯುವ ಕ್ಷೇತ್ರ ಹೆಚ್ಚಿಸಲು ಜಿಲ್ಲೆಯ ತೋಟಗಾರಿಕಾ ಇಲಾಖೆಯು ರೈತರು ಮತ್ತು ಕೇರಳದ ಕಂಪನಿ ಜೊತೆ ಒಪ್ಪಂದ ಮಾಡಿಸಿದೆ. ಇದಕ್ಕಾಗಿ ಮರಳಿ ಖರೀದಿಸು (ಬೈ ಬ್ಯಾಕ್‌) ವ್ಯವಸ್ಥೆ ಜಾರಿಗೆ ತಂದಿದೆ.

ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಲಸು ಬೆಳೆಯಲಾಗುತ್ತಿದೆ. ಅಲ್ಲಿಗೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಹಲಸು ಬೆಳೆಯುವ ಪ್ರಮಾಣ ಕಡಿಮೆ. ಆದರೆ ಕೊಪ್ಪಳ, ಗದಗ, ವಿಜಯನಗರ, ವಿಜಯಪುರ, ಬಾಗಲಕೋಟೆ, ರಾಯಚೂರು, ಧಾರವಾಡ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಗಟ್ಟಿಮಣ್ಣಿನ ನೆಲ ಮತ್ತು ಈ ಭಾಗದ ವಾತಾವರಣದಲ್ಲಿ ಸಮೃದ್ಧವಾಗಿ ಬೆಳೆಯುವ ಥಾಯ್ ಹಲಸಿನ ತಳಿಗೆ ಕೇರಳದಲ್ಲಿ ವ್ಯಾಪಕ ಬೇಡಿಕೆಯಿದೆ. ಆದ್ದರಿಂದ ಇಲ್ಲಿನ ತೋಟಗಾರಿಕಾ ಇಲಾಖೆ ಕೇರಳದ ಫ್ಲೋರಜಾ ಎನ್ನುವ ಕಂಪನಿ ಜೊತೆ ಮಧ್ಯಸ್ಥಿಕೆದಾರರಾಗಿ ರೈತರ ಜೊತೆ ಒಪ್ಪಂದ ಮಾಡಿಸಿದೆ.

ಈ ಕಂಪನಿ ಉತ್ತರ ಕರ್ನಾಟಕ ಜಿಲ್ಲೆಗಳ ರೈತರ ಜೊತೆ ’ಬೈ ಬ್ಯಾಕ್‌’ ವ್ಯವಸ್ಥೆಯಡಿ ಸಾವಯವ ಮಾದರಿಯಲ್ಲಿ ಕೃಷಿ ಮಾಡಿಸಿ ಹಲಸು ಕ್ಷೇತ್ರ ಹೆಚ್ಚಳಕ್ಕೆ ಒಪ್ಪಂದ ಮಾಡಿಕೊಂಡಿದೆ. ಸಸಿಗಳ ವಿತರಣೆ, ನಿರ್ವಹಣೆ, ಬೆಳೆಯುವ ವಿಧಾನ, ಮಾರುಕಟ್ಟೆ ಹೀಗೆ ಅನೇಕ ಸೌಲಭ್ಯಗಳನ್ನು ಕಂಪನಿ ನೇರವಾಗಿ ಒದಗಿಸುತ್ತಿದೆ. ಎರಡು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆ ಕೆಲವೆಡೆ ಮಾತ್ರ ಅಲ್ಲಲ್ಲಿ ಹಲಸಿನ ಮರಗಳಿದ್ದವು. ಈಗ ಒಪ್ಪಂದ ಮಾಡಿಕೊಂಡ ಕಂಪನಿಯೇ ಹಲಸು ಖರೀದಿ ಮಾಡುವುದರಿಂದ 50 ಎಕರೆಯಲ್ಲಿ ಬೆಳೆ ಬೆಳೆಯಲಾಗಿದೆ. ರಾಜ್ಯದಲ್ಲಿ ಒಟ್ಟು ಆರು ಸಾವಿರ ಎಕರೆ ಪ್ರದೇಶದಲ್ಲಿ ಥಾಯ್‌ ತಳಿಯ ಫಸಲು ಬೆಳೆಸುವ ಗುರಿಯನ್ನು ಕಂಪನಿ ಹೊಂದಿದೆ.

ADVERTISEMENT

‘ಉತ್ತರ ಕರ್ನಾಟಕದಲ್ಲಿ ಥಾಯ್‌ ತಳಿ ವರ್ಷಪೂರ್ತಿ ಫಸಲು ಬಿಡುತ್ತದೆ. ಇಲ್ಲಿನ ಹವಾಗುಣ ಅದಕ್ಕೆ ಪೂರಕ. ಮಳೆ ಕಡಿಮೆ ಬೀಳುವ ಪ್ರದೇಶ ಗುರಿಯಾಗಿರಿಸಿ ಕ್ಷೇತ್ರವನ್ನು ಹೆಚ್ಚಿಸಲಾಗುತ್ತಿದೆ. ಫಸಲು ಬಿಡುವ ಮೊದಲೇ ಕಂಪನಿಯವರು ಖರೀದಿ ಒಪ್ಪಂದ ಮಾಡಿಕೊಳ್ಳುವುದರಿಂದ ನಮಗೆ ಮಾರುಕಟ್ಟೆಯ ಸಮಸ್ಯೆಯೇ ಇಲ್ಲ. ಆದಾಯವೂ ನಿಶ್ಚಿತ’ ಎಂದು ಥಾಯ್‌ ತಳಿಯ ಹಲಸಿನ ನರ್ಸರಿ ಮಾಡಿರುವ ಯಲಬುರ್ಗಾ ತಾಲ್ಲೂಕಿನ ಮಾಟಲದಿನ್ನಿ ಗ್ರಾಮದ ರೈತ ಮಹೇಶ ಹಳ್ಳಿ ಹೇಳಿದರು. ಇವರ ನರ್ಸರಿಯಿಂದಲೇ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹಲಸಿನ ಸಸಿಗಳನ್ನು ಕೊಡಲಾಗಿದೆ. 

ಉತ್ತರ ಕರ್ನಾಟಕದ ವಾತಾವರಣದಲ್ಲಿ ಬೆಳೆಯುವ ಹಲಸಿಗೆ ವ್ಯಾಪಕ ಬೇಡಿಕೆ ಇದೆ. ಒಪ್ಪಂದದ ಕೃಷಿಯಿಂದ ರೈತರಿಗೂ ಲಾಭವಾಗುತ್ತದೆ
ಕೃಷ್ಣ ಸಿ. ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕೊಪ್ಪಳ
ಹಲಸಿನ ಫಸಲು ಸಂಸ್ಕರಣೆ ಮಾಡಲು ಆಯಾ ಜಿಲ್ಲೆಯಲ್ಲಿಯೇ ಘಟಕಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ರೈತರು ಹಾಗೂ ಅಲ್ಲಿನ ಜನರಿಗೆ ಉದ್ಯೋಗವೂ ಲಭಿಸುತ್ತದೆ. ರೈತರಿಗೂ ಆದಾಯ ಲಭಿಸುತ್ತದೆ
ಅನಿಲ್‌ ಕುಮಾರ್‌ ಆರ್‌.  ಫ್ಲೋರಜಾ ಕಂಪನಿಯ ಯೋಜನಾ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.