
ಕವಿತಾಳ: ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಯ ದಾಸೋಹಕ್ಕಾಗಿ ಸಮೀಪದ ಬಾಗಲವಾಡ ಗ್ರಾಮಸ್ಥರು ಬೆಲ್ಲದ ಲಡ್ಡು ತಯಾರಿಸಿದ್ದಾರೆ.
ಗ್ರಾಮದ ಮುಖಂಡರು, ಮಹಿಳೆಯರು ಮತ್ತು ಯುವಕರು ಗ್ರಾಮದ ಶಾಂಭವಿ ಮಠದಲ್ಲಿ ಮಂಗಳವಾರ ಬೆಲ್ಲದ ಲಡ್ಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಅಡುಗೆ ತಯಾರಕ ಮಲ್ಲಿಕಾರ್ಜುನ ದಿದ್ದಗಿ ಅವರು ಬೂಂದಿ, ಬೆಲ್ಲದ ಪಾಕ ಮಿಶ್ರಣ ಮಾಡಿ ನೀಡಿದಂತೆ ಗುಂಪು ಗುಂಪಾಗಿ ಕುಳಿತ ಮಹಿಳೆಯರು ಲಡ್ಡು ಕಟ್ಟಿದರು.
‘ಅಂದಾಜು 3 ಕ್ವಿಂಟಲ್ ಬೆಲ್ಲದ ಲಡ್ಡು ತಯಾರಿಸಲಾಗಿದೆ. ಮಹಿಳೆಯರು, ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ, 5 ಕ್ವಿಂಟಲ್ ಬೆಲ್ಲದ ಲಡ್ಡು ಮತ್ತು 5 ಕ್ವಿಂಟಲ್ ಅಕ್ಕಿಯನ್ನು ಜ.2 ರಂದು ಕೊಪ್ಪಳದ ಮಠಕ್ಕೆ ತಲುಪಿಸಲಾಗುವುದು’ ಎಂದು ಮುಖಂಡ ಸೂರ್ಯಪ್ಪ ಸಾಹುಕಾರ ಹೇಳಿದರು.
‘ಕಳೆದ ವರ್ಷದ ಜಾತ್ರೆಗೆ ಶೇಂಗಾ ಹೋಳಿಗೆ ತಯಾರಿಸಲಾಗಿತ್ತು, ಈ ವರ್ಷ ಬೆಲ್ಲದ ಲಡ್ಡು ಕೊಡುತ್ತಿದ್ದೇವೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಜಾತ್ರೆಯಲ್ಲಿ ಇದೊಂದು ಸಣ್ಣ ಸೇವೆʼ ಎಂದು ಗೃಹಣಿ ಶಶಕಿಲಾ ಚಂದ್ರಡ್ಡಿ ತಿಳಿಸಿದರು.
ಮುಖಂಡರಾದ ಸಿ.ಡಿ.ಅಮರೇಶ ಸಾಹುಕಾರ, ಶಿವಶಂಕರ ಮೇಟಿ, ಅಂಬು ಮಾಲೀಗೌಡ, ಶಿವಬಸವ ಸಾಹುಕಾರ, ಲಿಂಗಪ್ಪ ಮೇಟಿ, ಗೌರಮ್ಮ, ಭಾಗ್ಯಮ್ಮ ಜಿನ್ನ, ಗುಂಡಮ್ಮ ಸುಂಕನೂರು, ಜ್ಯೋತಿ ರಾಮರಡ್ಡಿ ಮತ್ತಿತರರು ಲಡ್ಡು ತಯಾರಿಕೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.