ಕೊಪ್ಪಳ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ನೌಕರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಉದ್ಯೋಗದ ಆಕಾಂಕ್ಷಿಗಳಿಗೆ ನೆರವಾಗಬೇಕು ಎಂದು ಆಗ್ರಹಿಸಿ ಯುವಜನತೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಐಡಿಎಸ್ಒ ಸಮಿತಿಯ ಮುಖಂಡ ಸುಭಾನ್ ನೀರಲಗಿ, ‘ನಿರುದ್ಯೋಗಕ್ಕೆ ಜನಸಂಖ್ಯೆಯಾಗಲಿ, ಕೌಶಲದ ಕೊರತೆಯಾಗಲಿ ಕಾರಣವಲ್ಲ. ಇದು ದೊಡ್ಡ ಸುಳ್ಳು. ಯುವಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದಕ್ಕೆ ಮುಖ್ಯಕಾರಣ ನಿರುದ್ಯೋಗವಾಗಿದೆ’ ಎಂದು ಆರೋಪಿಸಿದರು.
ಉದ್ಯೋಗಾಕಾಂಕ್ಷಿ ಶರಣು ಲಿಂಗದಹಳ್ಳಿ ಮಾತನಾಡಿ,‘ನಾವೆಲ್ಲರೂ ಒಗ್ಗಟ್ಟಾಗಬೇಕು, ನಮ್ಮ ಹಕ್ಕುಗಳನ್ನು ಕೇಳದಿದ್ದರೆ ನಮ್ಮ ಧ್ವನಿ ಸರ್ಕಾರಕ್ಕೆ ತಲುಪುವುದಾದರೂ ಹೇಗೆ? ಹಾಗಾಗಿ ನಮ್ಮ ಒಗ್ಗಟ್ಟು, ನಮ್ಮ ಶಕ್ತಿ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟಕ್ಕೆ ಮುಂದಾಗಬೇಕು’ ಎಂದು ಕರೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಸೈಯದ್ ತೌಫಿಕ್ ಮಾತನಾಡಿ ‘ಚುನಾವಣಾ ಸಂದರ್ಭದಲ್ಲಿ ಮತ ಕೇಳುವಾಗ ಇರುವ ಕಾಳಜಿ, ಸಮಸ್ಯೆಗಳನ್ನು ಬಗೆಹರಿಸುವಾಗ ಇರುವುದಿಲ್ಲ. ಯುವಕರನ್ನು ಬೀದಿಗಿಳಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿಮುಟ್ಟಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಯುವಕರು ಮಾಡಬೇಕು’ ಎಂದು ಹೇಳಿದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಸದಸ್ಯ ಕಾಸೀಂ ಕೆ.ಎನ್. ನಾಗೇಶನಹಳ್ಳಿ, ನಿಂಗು ಬೆಣಕಲ್, ಶಶಿಕಲಾ ಹಿರೇಸಿಂದೋಗಿ, ಶರಣು ಪಾಟೀಲ, ಬಸವರಾಜ ತಾವರಗೇರಾ, ಶರಣು ಆಗೋಲಿ, ಶಿವಕುಮಾರ್ ಕಂಚಿ, ನಾಗರಾಜ ವಿಠಲಾಪುರ, ಹೊನ್ನೂರ ಬೋಚನಹಳ್ಳಿ, ಪ್ರದೀಪ್ ಮಾದಿನೂರು, ಮಾರುತಿ ನಾಗೇಶನ ಹಳ್ಳಿ, ಮೌನೇಶ್ ಮಂಗಳೂರು, ಯಮನೂರ ಚಳ್ಳಾರಿ ಪಾಲ್ಗೊಂಡಿದ್ದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದ್ದು ಸುಳ್ಳಾಗಿದೆ.ಶರಣು ಗಡ್ಡಿ ಎಐಡಿವೈಒ ಸಂಘಟನೆ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.