
ಕನಕಗಿರಿ: ಟೊಮೆಟೊ ದರ ಕುಸಿತ ಕಂಡ ಹಿನ್ನೆಲೆ ರೈತರು ರಸ್ತೆಯಲ್ಲಿಯೇ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿ, ಖಾಲಿ ಬಾಕ್ಸ್ಗಳನ್ನು ಮನೆಗೆ ತೆಗೆದುಕೊಂಡು ಹೋದರು.
ಅನೇಕ ರೈತರು ತಮ್ಮ ಪರಿಚಯಸ್ಥ ಜನರನ್ನು ಕೂಗಿ ಉಚಿತವಾಗಿ ಟೊಮೆಟೊ ಹಂಚಿದರು. ಉತ್ತಮ ದರ ಸಿಗದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ರೈತರು ಸಪ್ಪೆಮುಖ ಹಾಕಿಕೊಂಡು ಮನೆ ಕಡೆಗೆ ಹೆಜ್ಜೆ ಹಾಕಿದರು.
ಕಳೆದ ಮೂರು ತಿಂಗಳ ಹಿಂದೆ ಒಂದು ಬಾಕ್ಸ್ ಟೊಮೆಟೊ ₹500 ರಿಂದ ₹600ಕ್ಕೆ ಮಾರಾಟವಾಗಿತ್ತು. ಒಂದು ತಿಂಗಳ ಹಿಂದೆ ಬಾಕ್ಸ್ಗೆ ₹150 ರಿಂದ ₹250ಕ್ಕೆ ಮಾರಾಟವಾಗಿತ್ತು. ಶುಕ್ರವಾರ ಎಪಿಎಂಸಿಯಲ್ಲಿ ₹30 ರಿಂದ ₹50ಕ್ಕೆ ಮಾರಾಟವಾದರೂ ಖರೀದಿಸುವವರು ಇರಲಿಲ್ಲ ಎನ್ನುತ್ತಾರೆ ರೈತರು.
ಈ ಭಾಗದಲ್ಲಿ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಬಹುತೇಕ ರೈತರು ಟೊಮೆಟೊ ಬೆಳೆದಿರುವುದು ದರ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆಯ ದಲ್ಲಾಳಿ ವರ್ತಕ ನಾಗೇಂದ್ರ ನಾಯಕ ತಿಳಿಸಿದರು.
ಕಷ್ಟಪಟ್ಟು ಬೆಳೆದ ಟೊಮೆಟೊ ಬೆಳೆಗೆ ಬೆಲೆ ಸಿಗುತ್ತಿಲ್ಲ, ಕೂಲಿಕಾರರಿಗೆ ಕೂಲಿ ಹಣ ನೀಡುವಷ್ಟು ದರ ಸಿಕ್ಕಿಲ್ಲ, ರೈತನ ಪರಿಸ್ಥಿತಿ ದೇವರೆ ಬಲ್ಲ ಎನ್ನುವಂತಾಗಿದೆ ಎಂದು ಬೈಲಕ್ಕುಂಪುರ, ಕನಕಗಿರಿ, ಸೋಮಸಾಗರ ರೈತರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.