ಪೊಲೀಸ್ – ಪ್ರಾತಿನಿಧಿಕ ಚಿತ್ರ
ಕೊಪ್ಪಳ: ‘ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕುಕನೂರು ಪೊಲೀಸ್ ಠಾಣೆಗೆ ಕಕ್ಷಿದಾರರೊಂದಿಗೆ ತೆರಳಿದ್ದಾಗ ಸಬ್ ಇನ್ಸ್ಪೆಕ್ಟರ್ ಟಿ.ಗುರುರಾಜ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು’ ಎಂದು ರಾಯಚೂರು ಮೂಲದ ವಕೀಲ ಸುನಿಲಕುಮಾರ ಪೊಲೀಸಪಾಟೀಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಘಟನೆ ಖಂಡಿಸಿರುವ ಜಿಲ್ಲಾ ವಕೀಲರ ಸಂಘದ ಸದಸ್ಯರೂ ಎಸ್ಪಿಗೆ ಮಾಹಿತಿ ನೀಡಿದ್ದು, ‘ಟಿ.ಗುರುರಾಜ ಅವರು ಇತರೆ ವಕೀಲರೊಂದಿಗೂ ಇದೇ ರೀತಿ ದುರ್ವರ್ತನೆ ತೋರಿದ್ದಾರೆ’ ಎಂದು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಉಪಾಧ್ಯಕ್ಷ ಬಿ.ವಿ. ಸಜ್ಜನ, ವಕೀಲರಾದ ಪ್ರಕಾಶ ಹಾದಿಮನಿ, ಹನುಮಂತರಾವ್, ಸುನೀಲಕುಮಾರ, ಬಸವರಾಜ ಗಡಾದ ಇತರರು ಇದ್ದರು.
‘ಕುಕನೂರು ಪೊಲೀಸ್ ಠಾಣೆಗೆ ಬಂದಿದ್ದ ವಕೀಲ ಮತ್ತು ಅವರ ಸಂಬಂಧಿಕರು ಎದುರುದಾರ ಮಹಿಳೆಯೊಂದಿಗೆ ಠಾಣೆ ಆವರಣದಲ್ಲಿ ಅನುಚಿತವಾಗಿ ವರ್ತಿಸಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ ವಕೀಲರ ಮೇಲೆ ಕಲಂ 92 ಪೊಲೀಸ್ ಕಾಯ್ದೆ ಅನ್ವಯ ಗುನ್ನೆ ದಾಖಲಿಸಿಕೊಂಡಿರುವ ಕುಕನೂರು ಪೊಲೀಸರು ಸೆ.1 ರಂದು ಯಲಬುರ್ಗಾ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ವಕೀಲ ಸುನಿಲಕುಮಾರ ಅವರಿಗೆ ಆ.31 ರಂದು ನೋಟಿಸ್ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.