ಕೊಪ್ಪಳ: ‘ನಾವೆಲ್ಲರೂ ಭಾವೈಕ್ಯದಿಂದ ಇದ್ದೇವೆ. ಈ ಬಾಂಧವ್ಯಕ್ಕೆ ಕೊಳ್ಳಿ ಇಟ್ಟು ಗವಿಸಿದ್ದಪ್ಪ ನಾಯಕನ ಕೊಲೆಗೆ ಕಾರಣರಾದ ಮುಸ್ಲಿಂ ಕುಟುಂಬಗಳಿಗೆ ಸಮುದಾಯದ ವತಿಯಿಂದ ಜಾಮೀನು ಸೇರಿದಂತೆ ಯಾವುದೇ ವಿಚಾರಕ್ಕೂ ನೆರವು ನೀಡುವುದಿಲ್ಲ. ಕೊಲೆಯಾದ ಯುವಕನಿಗೆ ನ್ಯಾಯ ಸಿಗುವ ತನಕ ನಿಮ್ಮೊಂದಿಗೆ ಹೋರಾಡುತ್ತೇವೆ’
ಇದು ಕೊಪ್ಪಳದ ಮುಸ್ಲಿಂ ಸಮಾಜದ ಪ್ರಮುಖರು ಗವಿಸಿದ್ಧಪ್ಪ ನಾಯಕ ಅವರ ಕುಟುಂಬದವರಿಗೆ ನೀಡಿದ ಭರವಸೆ. ಹಲವು ಮುಖಂಡರು ಗುರುವಾರ ಅವರ ಮನೆಗೆ ಭೇಟಿನೀಡಿ ಸಾಂತ್ವನ ಹೇಳಿದರು. ಈ ವೇಳೆ ಗವಿಸಿದ್ದಪ್ಪ ಕುಟುಂಬದವರ ದುಃಖದ ಕಟ್ಟೆಯೊಡೆದು ಆಕ್ರೋಶವಾಗಿ ಹೊರಹೊಮ್ಮಿತು.
ಆಗ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷರೂ ಆದ ಮುಸ್ಲಿಂ ಸಮಾಜದ ಮುಖಂಡ ಅಮ್ಜದ್ ಪಟೇಲ್, ‘ನಾವೆಲ್ಲರೂ ಒಂದೇ ಓಣಿಯಲ್ಲಿ ಇದ್ದವರು. ಘಟನೆ ನಡೆದ ದಿನದಿಂದಲೂ ಗವಿಸಿದ್ಧಪ್ಪನ ಕುಟುಂಬದವರ ಜತೆ ಇದ್ದೇವೆ. ನಮ್ಮ ಸಮಾಜದಲ್ಲಿ ಸಭೆ ಮಾಡಿದ್ದು ದುಷ್ಕೃತ್ಯ ಎಸಗಿದವರಿಗೆ ಯಾವುದೇ ಸಹಕಾರ ನೀಡುವುದಿಲ್ಲ. ಘಟನೆ ಬಳಿಕವೂ ಸಾಮಾಜಿಕ ತಾಣದಲ್ಲಿ ಸಮಾಜದ ಸ್ವಾಸ್ಥ ಹಾಳು ಮಾಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಾವೇ ದೂರು ನೀಡುತ್ತೇವೆ’ ಎಂದು ತಿಳಿಸಿದರು.
ಆಗ ಗವಿಸಿದ್ದಪ್ಪ ನಾಯಕ ಅವರ ಕುಟುಂಬದವರು, ‘ಆರೋಪಿಗಳು ಮತ್ತು ಕೊಲೆಗೆ ಪ್ರಚೋದನೆ ನೀಡಿದ ಕುಟುಂಬಗಳಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಫತ್ವಾ ಹೊರಡಿಸಬೇಕು’ ಎಂದು ಒತ್ತಾಯಿಸಿದರು. ಕೊಲೆಯಾದ ಬಳಿಕ ಮುಸ್ಲಿಮರು ನಮಾಜ್ ಮಾಡಿ ಸಂಭ್ರಮಿಸಿದ್ದಾರೆ; ನಮ್ಮ ಮಗ ಸತ್ತಾಗ ನಿಮಗೆ ಸಂಭ್ರಮವೇ? ಎಂದು ಅವರ ಸಹೋದರಿ ಅನ್ನಪೂರ್ಣ ಆಕ್ರೋಶಭರಿತರಾಗಿ ಪ್ರಶ್ನೆ ಮಾಡಿದರು. ‘ನಾವು ಯಾವುದೇ ಸಂಭ್ರಮ ಮಾಡಿಲ್ಲ. ಮನುಷ್ಯತ್ವ ಇರುವ ಯಾರೂ ಆ ರೀತಿ ಮಾಡುವುದಿಲ್ಲ’ ಎಂದು ಕಾಟನ್ ಪಾಷಾ ಹಾಗೂ ಇತರರು ಸಮಾಧಾನ ಪಡಿಸಿದರು.
ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾಧ್ಯಕ್ಷ ಮಹಮ್ಮದ್ ಜಿಲಾನ್ ಕಿಲ್ಲೇದಾರ್, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ ಆಸೀಫ್ ಕರ್ಕಿಹಳ್ಳಿ, ರಾಬ್ಟೆ ಮಿಲ್ಲತ್ ಸಂಘಟನೆ ಪ್ರಮುಖ ಲಾಯಖ್ ಅಲಿ, ಸಮಾಜದ ಮುಖಂಡರಾದ ಅಜೀಮ್ ಅತ್ತಾರ್, ಮಾನ್ವಿ ಪಾಷಾ, ಮೌಲಾಹುಸೇನ್ ಜಮೇದಾರ, ಹುಸೇನ್ ಪೀರಾ ಮುಜಾವರ, ಮುಸ್ತಫಾ ಕುದರಿಮೋತಿ, ಸಾಧಿಕ್ ಅತ್ತಾರ್, ಆರ್.ಎಂ. ರಫಿ, ಗಫಾರ್ ದಿಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕೊಲೆಯಾದ ಯುವಕನ ಕುಟುಂಬದವರಿಗೆ ನಗರಸಭೆಯಿಂದ ಕೊಡಬಹುದಾದ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ. ಆಶ್ರಯ ಮನೆ ಮಂಜೂರು ಮಾಡಲಾಗುವುದುಅಮ್ಜದ್ ಪಟೇಲ್ ನಗರಸಭೆ ಅಧ್ಯಕ್ಷ
ಕೊಲೆಯಾದ ದಿನ ಮಾನವೀಯತೆ ಇರುವ ಯಾರೂ ನಿದ್ದೆ ಮಾಡಿಲ್ಲ. ಹಳೆಯ ಕಾಲದ ಹಿಂದೂ–ಮುಸ್ಲಿಮರು ಭಾವೈಕ್ಯದಿಂದ ಇದ್ದೇವೆ. ಆದರೆ ಈಗಿನ ಯುವಕರಲ್ಲಿ ಆ ಭಾವನೆಯೇ ಬರುತ್ತಿಲ್ಲಕಾಟನ್ ಪಾಷಾ ಮುಸ್ಲಿಂ ಸಮುದಾಯದ ಮುಖಂಡ
ಗವಿಸಿದ್ದಪ್ಪ ಪ್ರೀತಿ ಮಾಡಿದ್ದಕ್ಕೆ ಕೊಲೆಯಾಗಿದ್ದಾನೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ಯುವತಿಯೂ ನನ್ನ ಮಗನನ್ನು ಪ್ರೀತಿಸಿಲ್ಲವೇ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವೇ?ದೇವಮ್ಮ ಕೊಲೆಯಾದ ಯುವಕನ ತಾಯಿ
11ರಂದು ಕೊಪ್ಪಳದಲ್ಲಿ ಪ್ರತಿಭಟನಾ ಮೆರವಣಿಗೆ:
ಗವಿಸಿದ್ದಪ್ಪ ನಾಯಕ ಕೊಲೆ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಆ. 11ರಂದು ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ ಹಾಗೂ ಇತರರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ’ಅಂದು ಗಡಿಯಾರ ಕಂಬದಿಂದ ಅಶೋಕ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಯಾರೇ ಬಂದರೂ ಸ್ವಾಗತವಿದೆ. ಯಾರೂ ತಮ್ಮ ಸಂಘಟನೆಯ ಅಥವಾ ರಾಜಕೀಯ ಪಕ್ಷದ ಬ್ಯಾನರ್ ತರಬಾರದು’ ಎಂದು ಹೇಳಿದರು. ಕೊಲೆಯಾದ ಗವಿಸಿದ್ದಪ್ಪನ ತಂದೆ ನಿಂಗಜ್ಜ ತಾಯಿ ದೇವಮ್ಮ ಸಹೋದರಿಯರಾದ ಅನ್ನಪೂರ್ಣ ಹಾಗೂ ಉಮಾ ’ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮುಸ್ಲಿಂ ಯುವತಿಯ ಪ್ರಚೋದನೆಯಿಂದಲೇ ನಮ್ಮ ಮನೆಯ ಹುಡುಗ ಕೊಲೆಯಾಗಿದ್ದಾನೆ. ಆಕೆಯನ್ನೂ ಬಂಧಿಸಿ ಶಿಕ್ಷೆ ವಿಧಿಸಬೇಕು. ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ಕೊಡಬೇಕು ಮುಸ್ಲಿಂ ಸಮಾಜದ ಯಾರೂ ಜಾಮೀನು ಕೊಡಬಾರದು’ ಎಂದು ಆಗ್ರಹಿಸಿದರು. ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಎಚ್. ನಾಯಕ ಮುಖಂಡರಾದ ನಾಗರಾಜ ಬಿಲ್ಗಾರ್ ಹಾಗೂ ಗೀತಾ ಮುತ್ತಾಳ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.