
ಕೊಪ್ಪಳ: 'ಜಂಗಮ ಸಮಾಜದಿಂದ ಭಾಗ್ಯನಗರದಲ್ಲಿ ಭೂಮಿ ಖರೀದಿಸಲಾಗಿತ್ತು, ಈಗ ಕಟ್ಟಡ ಕಾಮಗಾರಿಗೆ ಸಮಯ ಕೂಡಿಬಂದಿದ್ದು, ಇಂದು ಸಮಾಜದ ಎಲ್ಲರೂ ಸೇರಿ ನೂತನ ಸಂಸ್ಕೃತ ಪಾಠಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು ಖುಷಿ ನೀಡಿದೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಭಾಗ್ಯನಗರದ ಓಜನಹಳ್ಳಿ ರಸ್ತೆಯಲ್ಲಿರುವ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ದಿಯ ಜಾಗೆಯಲ್ಲಿ ಶುಕ್ರವಾರ ಸಂಸ್ಕೃತ ಪಾಠ ಶಾಲೆಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿ ‘ಮುಂದಿನ ದಿನಗಳಲ್ಲಿ ಈ ಕಟ್ಟಡಕ್ಕೆ ಬೇಕಾದ ಮೂಲ ಸೌಕರ್ಯಗಳಿಗೆ ಸಾಧ್ಯವಾದಷ್ಟು ನೆರವು ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಹಂಪಯ್ಯ ಮೆತಗಲ್ ಮಾತನಾಡಿ ‘ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಪ್ರತಿಯೊಬ್ಬ ವಟುಗಳಿಗೆ ವೇದ, ಅಧ್ಯಯನ ಹಾಗೂ ಸಂಸ್ಕೃತ ಪಾಠಶಾಲೆ ಪ್ರಾರಂಭಗೊಳ್ಳಲಿವೆ. ಇದಕ್ಕೆ ಸಮಾಜದ ಪ್ರತಿಯೊಬ್ಬರ ಸಹಾಯ, ಸಹಕಾರ ಅಗತ್ಯವಾಗಿದೆ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರಸಾಬ್ ಭೈರಾಪುರ, ಸದಸ್ಯ ಗವಿಸಿದ್ದಯ್ಯ, ಕೊಪ್ಪಳ ನಗರಸಭೆ ಸದಸ್ಯರಾದ ಬಸಯ್ಯ ಹಿರೇಮಠ, ಗುರುರಾಜ್ ಹಲಿಗೇರಿ, ಕಾಂಗ್ರೆಸ್ ಮುಖಂಡ ಕೆ.ಎಂ. ಸೈಯದ್, ಜಂಗಮ ಸಮಾಜದ ಗೌರವಾಧ್ಯಕ್ಷ ಕೊಟ್ರಬಸಯ್ಯ ಹಿರೇಮಠ, ಅಧ್ಯಕ್ಷ ಹಂಪಯ್ಯ ಮೆತಗಲ್ಲ, ಉಪಾಧ್ಯಕ್ಷ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಪ್ರಧಾನ ಕಾರ್ಯದರ್ಶಿ ಬಸಯ್ಯ ಹಿರೇಮಠ, ಸಮಾಜದ ಮುಖಂಡರಾದ ವಿಎಂ ಭೂಸನೂರಮಠ, ನೀಲಕಂಠಯ್ಯ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.