ಕಾರಟಗಿ: ವಿದ್ಯಾರ್ಥಿಗಳ ಜ್ಞಾನ ಸಂಪಾದನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗುವ ಹೈಟೆಕ್ ಗ್ರಂಥಾಲಯ ಸ್ಥಾಪಿಸಬೇಕು ಎಂಬ ಅನೇಕರ ಮನವಿಗೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆ ಸ್ಪಂದಿಸಿರಲಿಲ್ಲ. ಇದನ್ನೇ ಸವಾಲಾಗಿ ತೆಗೆದುಕೊಂಡ ಯುವಕರ ‘ಪುಣ್ಯಕೋಟಿ’ ಗುಂಪು ಸುಸಜ್ಜಿತ ‘ಜ್ಞಾನ ಭಂಡಾರ’ ಆರಂಭಿಸಿದೆ.
‘ಪುಣ್ಯಕೋಟಿ’ ಗುಂಪಿನ ಯುವಕರು ನಾಲ್ಕು ತಿಂಗಳ ಹಿಂದೆ ಪಟ್ಟಣದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು, ₹2.5 ಲಕ್ಷಕ್ಕೂ ಹೆಚ್ಚಿನ ಸ್ವಂತ ಹಣ ಖರ್ಚು ಮಾಡಿ ಜ್ಞಾನ ಭಂಡಾರವನ್ನು (ಗ್ರಂಥಾಲಯ) ಸ್ಥಾಪಿಸಿದೆ. ಗೃಹಿಣಿ ಜಯಶ್ರೀ ಚನ್ನಯ್ಯಸ್ವಾಮಿ ಶೀಲವಂತರ ಅವರಿಂದ ಈ ಗ್ರಂಥಾಲಯವನ್ನು ಉದ್ಘಾಟಿಸಿದ್ದಾರೆ.
‘ಜ್ಞಾನ ಭಂಡಾರ’ ಕೇಂದ್ರದಲ್ಲಿ ದಿನಪತ್ರಿಕೆ, ವಾರ ಪತ್ರಿಕೆ, ಕಥೆ, ಕಾದಂಬರಿ, ವೈಚಾರಿಕ ಪುಸ್ತಕಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗುವ ಜೊತೆಗೆ ವಿವಿಧ ಇಲಾಖೆಗಳ ನೇಮಕಾತಿಗಳಿಗೆ ಸಹಕಾರಿಯಾಗುವ ಪುಸ್ತಕಗಳು ಇವೆ.
ಕೊಠಡಿಯಲ್ಲಿ 2 ಸಾಲುಗಳ ಕೌಂಟರ್ ಮಾಡಿ, ಏಕಕಾಲಕ್ಕೆ 14 ಜನರು ಅಭ್ಯಾಸದಲ್ಲಿ ನಿರತರಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಓದುಗರ ಆಸಕ್ತಿಗೆ ತಕ್ಕಂತೆ ವಿವಿಧ ಪುಸ್ತಕಗಳನ್ನು ತರಿಸಿ, ಪುಸ್ತಕ ಸಂಗ್ರಹಣೆ ವಿಭಾಗದಲ್ಲಿರಿಸುವ ಕಾರ್ಯ ನಿರಂತರವಾಗಿ ನಡೆದಿದೆ. ವಿವಿಧೆಡೆ ಕಾರ್ಯಗಾರಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ, ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗೊಳಿಸುವ ಯತ್ನವೂ ಮಾಡಲಾಗಿದೆ. ಈ ಕಾರ್ಯ ನಿರಂತರವಾಗಿ ಮುಂದುವರಿಸುವ ಸಂಕಲ್ಪ ಯುವಕರದ್ದಾಗಿದೆ.
‘ಹತ್ತಾರು ಸಾವಿರ ರೂಪಾಯಿ ವ್ಯಯಿಸಿ, ಕೋಚಿಂಗ್ಗೆ ಹೋಗುವ ಪದ್ಧತಿಗೆ ಅಂತ್ಯ ಹಾಡುವುದು ಯುವಕರ ಸಂಕಲ್ಪವಾಗಿದೆ. ನಮಗೆ ಸಮಾನ ಮನಸ್ಕರು ಸಹಾಯ, ಸಹಕಾರ ನೀಡಿದ್ದಾರೆ. ಜನಪ್ರತಿನಿಧಿಗಳು, ಸ್ಥಳೀಯಾಡಳಿತ ಕನಿಷ್ಠ ಸೌಲಭ್ಯ ಒದಗಿಸಲು ಮುಂದಾದರೆ, ಶೈಕ್ಷಣಿಕ, ಉದ್ಯೋಗದ ಕ್ರಾಂತಿ ಮಾಡುವ ಉತ್ಸಾಹ ನಮ್ಮಲ್ಲಿದೆ’ ಎನ್ನುತ್ತಾರೆ ಪುಣ್ಯಕೋಟಿ ಗುಂಪಿನ ಲಿಂಗಯ್ಯಸ್ವಾಮಿ ಶೀಲವಂತರ ಹಾಗೂ ಮಂಜುನಾಥಗೌಡ ಹೊನಗುಡಿ.
‘ಗವಿಸಿದ್ದೇಶ್ವರ ಶ್ರೀಗಳು ಪಟ್ಟಣದಲ್ಲಿ ನಡೆದ ಪ್ರವಚನದಲ್ಲಿ ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯದ ಬಗ್ಗೆ ಉಲ್ಲೇಖಿಸಿದ್ದು ನಮಗೆ ಪ್ರೇರಣೆಯಾಯಿತು. ಕೊಪ್ಪಳದ ಮಠಕ್ಕೆ ತೆರಳಿದಾಗ ಶ್ರೀಗಳು ಗ್ರಂಥಾಲಯದ ಮಹತ್ವ ತಿಳಿಸಿ, ತಮ್ಮಲ್ಲಿಯ ಗ್ರಂಥಾಲಯವನ್ನು ತೋರಿಸಿ ಉತ್ತೇಜಿಸಿದ್ದರು. ಇದೇ ಪ್ರೇರಣೆಯಿಂದ ನಮ್ಮಲ್ಲಿ ಗ್ರಂಥಾಲಯ ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.
ಪುರಸಭೆ ಮುಂದಾಗಲಿ: ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ವಿದ್ಯಾರ್ಥಿಗಳಿಗೆ, ಯುವಕರಿಗೆ ಅನೇಕ ಅವಕಾಶಗಳಿಗೆ ಸನ್ನದ್ದಗೊಳಿಸುತ್ತೇವೆ ಎನ್ನುವ ಪುಣ್ಯಕೋಟಿ ಗುಂಪಿನ ಸದಸ್ಯರು ಪುರಸಭೆಗೆ ಸಿಎ ಸೈಟ್ಗಾಗಿ ಮನವಿ ಸಲ್ಲಿಸಿದ್ದರು. ಹಾರಿಕೆ ಉತ್ತರ ನೀಡಿ ಅಧಿಕಾರಿಗಳು ಮೌನವಾಗಿದ್ದಾರೆ. ಈ ಕಾರ್ಯಕ್ಕೆ ಪುರಸಭೆ ಆಸಕ್ತಿ ವಹಿಸಿ, ಸಿಎ ಸೈಟ್ ನೀಡುವ ತೀರ್ಮಾನಕ್ಕೆ ಬಂದು ಯುವಕರ ಕಳಕಳಿಯ ಯತ್ನಕ್ಕೆ ಸ್ಪಂದಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಸಮಾಜಕ್ಕೆ ಸೇವೆ ಮೂಲಕ ಋಣ ತೀರಿಸಬೇಕೆಂಬ ಕಳಕಳಿಯಿಂದ ಸೇವಾ ಕಾರ್ಯದಲ್ಲಿ ತೊಡಗಿದ್ದೇವೆ. ಜನಪ್ರತಿನಿಧಿಗಳು ಸ್ಪಂದಿಸಿದರೆ ಮತ್ತಷ್ಟು ಜ್ಞಾನ ಹಂಚುವ ಕಾರ್ಯಕ್ಕೆ ಸೇವೆ ಸಲ್ಲಿಸುತ್ತೇವೆ.ಲಿಂಗಯ್ಯಸ್ವಾಮಿ ಶೀಲವಂತರ, ಕಾರಟಗಿ
ವಿದ್ಯಾರ್ಥಿಗಳು ಯುವಕರು ಸ್ಫರ್ಧಾತ್ಮಕ ಪರೀಕ್ಷೆಗೆ ಸನ್ನದ್ಧರಾಗಲು ಗ್ರಂಥಾಲಯ ಸ್ಥಾಪಿಸಿದ್ದು ಹೈಟೆಕ್ ಗ್ರಂಥಾಲಯ ಮಾಡುವ ಗುರಿ ಇದೆಮಂಜುನಾಥಗೌಡ ಹೊನಗುಡಿ, ಕಾರಟಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.