ADVERTISEMENT

ಕೊಪ್ಪಳ: ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಡಿಡಿಪಿಐ ಕಚೇರಿಯಲ್ಲಿ 17 ಹುದ್ದೆ ಖಾಲಿ, ಮತ್ತೆ ಮೂವರು ವರ್ಗಾವಣೆ

ಪ್ರಮೋದ ಕುಲಕರ್ಣಿ
Published 24 ಜೂನ್ 2025, 4:57 IST
Last Updated 24 ಜೂನ್ 2025, 4:57 IST
   

ಕೊಪ್ಪಳ: ಜಿಲ್ಲೆಯಲ್ಲಿರುವ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿವಿಧ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವ ಇಲ್ಲಿನ ಶಾಲಾ ಶಿಕ್ಷಣ ಇಲಾಖೆಗೆ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಇರುವ ಸಿಬ್ಬಂದಿ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಇತ್ತೀಚೆಗೆ ವರ್ಗಾವಣೆಯಾದ ನೌಕರರಿಗೂ ಇದರ ಬಿಸಿ ತಟ್ಟುತ್ತಿದೆ. 

ಈಗಾಗಲೇ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿರುವ ಕಾರಣ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಮೇಲಧಿಕಾರಿಗಳ ಹಾಗೂ ಶಿಕ್ಷಣ ಇಲಾಖೆಗೆ ಸಂಬಂಧಿಸಿ ಸರ್ಕಾರದ ಸೂಚನೆಗಳನ್ನು ಅನುಷ್ಠಾನ ಮಾಡುವ ಇಲಾಖೆಗೆ ಸಿಬ್ಬಂದಿ ಕೊರತೆ ವ್ಯಾಪಕವಾಗಿದೆ. ಇರುವ ಸಿಬ್ಬಂದಿಯೇ ಎರಡ್ಮೂರು ವಿಭಾಗಗಳ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.

ಜಿಲ್ಲೆಯ ವಿವಿಧ ಶಾಲೆಗಳಿಗೆ ಡಿಡಿಪಿಐ ಭೇಟಿ ನೀಡುವುದು, ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆಯೇ? ಇಲ್ಲವೇ? ಎನ್ನುವ ಪರಿಶೀಲನೆ, ದಾಖಲಾತಿ, ಬಿಇಒಗಳು ಹಾಗೂ ಶಿಕ್ಷಕರ ಕಾರ್ಯವೈಖರಿ ಮೇಲೆ ನಿಗಾ ಹೀಗೆ ಅನೇಕ ಕೆಲಸಗಳ ಜೊತೆಗೆ ಕೇಂದ್ರ ಕಚೇರಿಯಿಂದ ಆನ್‌ಲೈನ್‌ ಮೂಲಕ ಮೇಲಿಂದ ಮೇಲೆ ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳುವುದು ಹೀಗೆ ಸಾಕಷ್ಟು ಕೆಲಸದ ಒತ್ತಡ ಈಗಿನ ಅಧಿಕಾರಿಗಳನ್ನು ಕಾಡುತ್ತಿದೆ.

ADVERTISEMENT

ಜಿಲ್ಲೆಗೆ ಡಿವೈಎಸ್‌ಪಿ (ಸಮಗ್ರ ಶಿಕ್ಷಣ ಕರ್ನಾಟಕ) ಎರಡು ಹುದ್ದೆಗಳು ಮಂಜೂರಾಗಿದ್ದು ಒಂದು ಖಾಲಿಯಿದೆ. ಪ್ರಸ್ತುತ ಈ ಹುದ್ದೆಯಲ್ಲಿರುವ ಸಿಬ್ಬಂದಿ ಸ್ವಯಂ ನಿವೃತ್ತಿ ಕೋರಿ ರಜೆ ಮೇಲೆ ತೆರಳಿದ್ದಾರೆ. ವಿಷಯ ಪರಿವೀಕ್ಷಕರಿಗೆ ಮಂಜೂರಾದ ಆರು ಹುದ್ದೆಗಳಲ್ಲಿ ಐದು ಖಾಲಿಯಿದ್ದು, ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರು ಅಧೀಕ್ಷಕರು ಹುದ್ದೆಗಳಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು ಒಂದು ಹುದ್ದೆ ಖಾಲಿಯಿದೆ. ಜಿಲ್ಲೆಗೆ ಪ್ರಥಮ ದರ್ಜೆ ಸಹಾಯಕರ ಎಂಟು ಹುದ್ದೆಗಳು ಮಂಜೂರಾಗಿದ್ದು ಐದು ಹುದ್ದೆಗಳು ಖಾಲಿ ಉಳಿದಿವೆ. ಪ್ರಥಮ ದರ್ಜೆ ಸಹಾಯಕ ಎಸ್‌ಎಸ್‌ಕೆಯಲ್ಲಿ ಒಂದು, ಪರಿಚಾರಕರ ಆರು ಹುದ್ದೆಗಳಲ್ಲಿ ಎರಡು ಹೀಗೆ ಒಟ್ಟು 17 ಹುದ್ದೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದು ಇದು ಡಿಡಿಪಿಐ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇಷ್ಟೊಂದು ಹುದ್ದೆಗಳ ಕೊರತೆಯ ನಡುವೆಯೂ ಇತ್ತೀಚೆಗೆ ಆಡಳಿತ ವಿಭಾಗದ ಲೆಕ್ಕ ಅಧೀಕ್ಷಕ, ಸಮಗ್ರ ಶಿಕ್ಷಣ ಕರ್ನಾಟಕ ವಿಭಾಗದ ಲೆಕ್ಕ ಅಧೀಕ್ಷಕ ಇಬ್ಬರನ್ನೂ ಬಳ್ಳಾರಿಗೆ ವರ್ಗಾವಣೆ ಮಾಡಲಾಗಿದೆ. ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದವರು ಕೌನ್ಸೆಲಿಂಗ್‌ ಮೂಲಕ ಮುನಿರಾಬಾದ್ ಡಯಟ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಆದ್ದರಿಂದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಇತ್ತೀಚೆಗೆ ಡಿಡಿಪಿಐ ಶ್ರೀಶೈಲ ಬಿರಾದಾರ ಅವರು ಪತ್ರ ಬರೆದಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಕಚೇರಿ ಕಾರ್ಯನಿರ್ವಹಣೆ ಬಹಳ ಕಷ್ಟಕರವಾಗಿದೆ. ಆಡಳಿತಾತ್ಮಕ ಕಾರ್ಯಕ್ಕೆ ವಿಳಂಬವಾಗುತ್ತಿದೆ. ಆದ್ದರಿಂದ ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

‘ಯಾವ ಕೆಲಸ ಎನ್ನುವುದೇ ತಿಳಿಯದಾಗಿದೆ’

‘ಸಿಬ್ಬಂದಿ ಕೊರತೆ ಇರುವ ಕಾರಣ ಒಟ್ಟಿಗೆ ಎರಡೆರೆಡು ಕೆಲಸಗಳನ್ನು ಮಾಡಬೇಕಾಗಿದೆ. ಯಾವುದಾದರೊಂದು ಕೆಲಸದಲ್ಲಿ ತಲ್ಲೀನರಾಗಿದ್ದರೆ ಇನ್ನೊಂದು ಸಭೆಗೆ ಹಾಜರಾಗುವಂತೆ ಅಥವಾ ಸ್ಥಳ ವೀಕ್ಷಣೆಗೆ ತೆರಳುವಂತೆ ಮೇಲಧಿಕಾರಿಯಿಂದ ಕರೆ ಬರುತ್ತದೆ. ಯಾವ ಕೆಲಸವೂ ಪೂರ್ಣವಾಗದೆ ಸಾಕಷ್ಟು ಕೆಲಸಗಳು ನೆನಗುದಿಗೆ ಬಿದ್ದಿವೆ’ ಎಂದು ಇಲಾಖೆಯಲ್ಲಿ ಕೆಲಸ ಮಾಡುವ ಹೆಸರು ಹೇಳಲು ಬಯಸದ ನೌಕರರೊಬ್ಬರು ಬೇಸರಿಸಿದರು.

ಕೊಪ್ಪಳದ ನಮ್ಮ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಬಹಳಷ್ಟಿದ್ದು ದೈನಂದಿನ ಕೆಲಸಕ್ಕೆ ತೊಂದರೆಯಾಗಿದೆ. ಆದ್ದರಿಂದ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
ಶ್ರೀಶೈಲ ಬಿರಾದಾರ, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.