ADVERTISEMENT

ಗಂಗಾವತಿ: ಟಿಬಿ ಡ್ಯಾಂನಿಂದ ಅಪಾರ ನೀರು ಹೊರಕ್ಕೆ– ಕೃಷ್ಣದೇವರಾಯ ಸಮಾಧಿ ಮುಳುಗಡೆ

ನವ ವೃಂದಾವನ ಗಡ್ಡೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 13:46 IST
Last Updated 9 ಆಗಸ್ಟ್ 2022, 13:46 IST
ನೀರಿನಲ್ಲಿ ಮುಳುಗಿ ಹೋಗಿರುವ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದಲ್ಲಿರುವ ಕೃಷ್ಣದೇವರಾಯ ಸಮಾಧಿ
ನೀರಿನಲ್ಲಿ ಮುಳುಗಿ ಹೋಗಿರುವ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದಲ್ಲಿರುವ ಕೃಷ್ಣದೇವರಾಯ ಸಮಾಧಿ   

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಮಂಗಳವಾರ ಅಪಾರ ಪ್ರಮಾಣದ ನೀರು ಬಿಟ್ಟಿರುವ ಕಾರಣ ಗಂಗಾವತಿ–ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಬೀದರ್‌, ಕಲಬುರಗಿ, ಮಂತ್ರಾಲಯ ಮತ್ತು ಹೈದರಾಬಾದ್‌ ಮಾರ್ಗದ ಬಸ್‌ಗಳು ನೀರಿನ ಹರಿವು ಇಳಿಮುಖವಾಗುವ ತನಕ ಬುಕ್ಕಸಾಗರ ಸೇತುವೆ ಮಾರ್ಗದಿಂದ ತೆರಳಬೇಕು ಎಂದು ಸ್ಥಳೀಯ ಆಡಳಿತ ಸೂಚಿಸಿದೆ.

ನದಿಯ ಮಧ್ಯಭಾಗದಲ್ಲಿರುವ ಅಂಜನಾದ್ರಿ ಬೆಟ್ಟದ ಸಮೀಪದ ಋಷಿಮುಖಿ ಪರ್ವತ, ಚಂದ್ರಮೌಳೇಶ್ಚರ ದೇವಸ್ಥಾನ, ವಿರೂಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ, ಆನೆಗೊಂದಿ ಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಸಂಪೂರ್ಣ ಜಲಾವೃತವಾಗಿದೆ. ನವವೃಂದಾವನ ಜನರ ಸಂಪರ್ಕ ಕಳೆದುಕೊಂಡಿದೆ.

ADVERTISEMENT

ನೀರಿನ ರಭಸ ಜೋರಾಗಿದ್ದು ಹನುಮನಹಳ್ಳಿ, ದೇವಘಾಟ್, ಲಕ್ಷ್ಮೀಪುರ, ನಾಗನಳ್ಳಿ, ಚಿಕ್ಕಜಂಕಲ್, ಅಯೋಧ್ಯೆ, ಮುಸ್ಟೂರು, ಢಣಾಪುರ, ಹೆಬ್ಬಾಳ ಭಾಗದ ನದಿಪಾತ್ರದಲ್ಲಿರುವ ಭತ್ತ, ಕಬ್ಬು, ಬಾಳೆ ತೋಟಗಳು ಜಲಾವೃತವಾಗಿವೆ. ಹಲವು ಕಡೆ ಕಣಿವೆಗಳು ಕೊಚ್ಚಿಹೋಗಿವೆ.

ಕಂಪ್ಲಿ- ಗಂಗಾವತಿ ಸೇತುವೆ 1,944 ಅಡಿ ಉದ್ದ, 22 ಅಡಿ ಅಗಲ ಇದೆ. 38 ಅಡಿಯ ಎಲ್ಲಾ 51 ಕಮಾನುಗಳಲ್ಲಿ ನೀರು ರಭಸವಾಗಿ ಹರಿಯುತ್ತಿವೆ.

ಎಚ್ಚರಿಕೆ: ಅಪಾಯಮಟ್ಟದಲ್ಲಿ ನೀರು ಬಿಡುಗಡೆ ಮಾಡಲಿರುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ನದಿ ಪಾತ್ರದಲ್ಲಿ ಓಡಾಡಬಾರದು. ಫೋಟೊಗಳನ್ನು ತೆಗೆದುಕೊಳ್ಳಲು ತೆರಳಬಾರದು. ಜಾನುವಾರುಗಳನ್ನು ಮೇಯಿಸಬಾರದು, ನದಿಪಾತ್ರದಲ್ಲಿ ಮನೆ ಇರುವವರು ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಎಂದು ಗಂಗಾವತಿ ತಹಶೀಲ್ದಾರ್ ಸೂಚಿಸಿದ್ದಾರೆ. ನದಿಪಾತ್ರದ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.