ADVERTISEMENT

ಕುಷ್ಟಗಿ: ಬತ್ತಿದ ಯಲಬುಣಚಿ ಕೆರೆಗೆ ಹರಿದುಬಂದ ಕೃಷ್ಣೆ

ಕೆರೆಗೆ ನೀರು ತುಂಬಿಸುವ ಯೋಜನೆಗೆ ಪ್ರಾಯೋಗಿಕ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 7:25 IST
Last Updated 26 ಮಾರ್ಚ್ 2023, 7:25 IST
ಕುಷ್ಟಗಿ ತಾಲ್ಲೂಕು ಯಲಬುಣಚಿ ಕೆರೆಗೆ ಶನಿವಾರ ಕೃಷ್ಣಾ ನದಿ ನೀರು ತುಂಬಿಸುವ ಯೋಜನೆಗೆ ಶಾಸಕ ಅಮರೇಗೌಡ ಬಯ್ಯಾಪುರ ಪೂಜೆ ನೆರವೇರಿಸಿದರು
ಕುಷ್ಟಗಿ ತಾಲ್ಲೂಕು ಯಲಬುಣಚಿ ಕೆರೆಗೆ ಶನಿವಾರ ಕೃಷ್ಣಾ ನದಿ ನೀರು ತುಂಬಿಸುವ ಯೋಜನೆಗೆ ಶಾಸಕ ಅಮರೇಗೌಡ ಬಯ್ಯಾಪುರ ಪೂಜೆ ನೆರವೇರಿಸಿದರು   

ಕುಷ್ಟಗಿ: ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ತಾಲ್ಲೂಕಿನಲ್ಲಿ ಚಾಲನೆ ದೊರೆತಿದ್ದು, ಯಲಬುಣಚಿ ಕೆರೆಗೆ ಶನಿವಾರ ಪ್ರಾಯೋಗಿಕವಾಗಿ ಕೃಷ್ಣಾ ನದಿ ನೀರು ಹರಿಸಲಾಯಿತು.

ಬತ್ತಿಹೋಗಿದ್ದ ಕೆರೆಗೆ ಕೃಷ್ಣಾ ನದಿ ನೀರು ಧುಮ್ಮಿಕ್ಕುತ್ತಿದ್ದಂತೆ ಅಲ್ಲಿ ನೆರೆದಿದ್ದ ರೈತರಿಂದ ಹರ್ಷೋದ್ಗಾರ ಕೇಳಿಬಂದಿತು. ಕಲಾಲಬಂಡಿ ಗ್ರಾಮದ ಬಳಿ ಇರುವ ಡಿಲೆವರಿ ಚೇಂಬರ್‌ನಲ್ಲನ ಯಂತ್ರದ ಗುಂಡಿ ಒತ್ತುವ ಮೂಲಕ ಶಾಸಕ ಅಮರೇಗೌಡ ಬಯ್ಯಾಪುರ ಚಾಲನೆ ನೀಡಿದರು.

ನಂತರ ಯಲಬುಣಚಿ ಕೆರೆಯಲ್ಲಿ ಪೂಜೆ ಸಲ್ಲಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಯ್ಯಾಪುರ,‘ಬರದ ನಾಡಿಗೆ ನೀರು ಹರಿದು ಬಂದಿರುವುದು ಅತ್ಯಂತ ಸಂತಸದ ಸಂಗತಿ. ಯೋಜನೆಗೆ ರೈತರು ಸಹಕಾರ ನೀಡಿದ್ದಾರೆ. ಸರ್ಕಾರ ಅನುದಾನ ಒದಗಿಸಿದೆ. ಯೋಜನೆ ಕಾರ್ಯಗತಗೊಳ್ಳುವಲ್ಲಿ ಅಧಿಕಾರಿಗಳು, ಗುತ್ತಿಗೆದಾರರ ಶ್ರಮ ಅಡಗಿದ್ದು ಅವರೆಲ್ಲರನ್ನೂ ಅಭಿನಂದಿಸುವುದಾಗಿ’ ತಿಳಿಸಿದರು.

ಆಲಮಟ್ಟಿ ಜಲಾಶಯದಲ್ಲಿ ನೀರಿನ ಲಭ್ಯತೆ ಆಧಾರದ ಮೇಲೆ ವರ್ಷದಲ್ಲಿ ಎರಡು ಬಾರಿ ಮಳೆಗಾಲ ಮತ್ತು ಬೇಸಿಗೆಯಲ್ಲಿ ಕೆರೆಗಳಿಗೆ ನೀರು ತುಂಬಿಸ ಲಾಗುತ್ತದೆ. ಆದರೆ ಇದರಿಂದ ನೀರಾವರಿ ಆಗುವುದಿಲ್ಲ. ಬದಲಾಗಿ ಅಂತರ್ಜಲ ಮಟ್ಟ ಹೆಚ್ಚಲಿದ್ದು, ಇದೊಂದು ಬಹು ಉಪಯೋಗಿ ಯೋಜನೆಯಾಗಿದೆ. ಆದರೆ ಚುನಾವಣೆಯನ್ನು ಗಮ
ನದಲ್ಲಿರಿಸಿಕೊಂಡು ಉದ್ಘಾಟನೆ ನಡೆಸಿಲ್ಲ. ಕೋವಿಡ್‌ ಕಾರಣಕ್ಕೆ ಕಾಮಗಾರಿ ವಿಳಂಬಗೊಂಡಿತ್ತು. ಕೆಬಿಜೆಎನ್‌ಎಲ್ ಕೈಗೆತ್ತಿಕೊಂಡಿರುವ ಕಾಮಗಾರಿಯ ಮೂಲಕ ತಾಲ್ಲೂಕಿನ ಒಟ್ಟು 17 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.ಯೋಜನೆಗೆ ಜಮೀನು ನೀಡಿದ ರೈತರಿಗೆ ಪರಿಹಾರ ಶೀಘ್ರದಲ್ಲಿ ವಿತರಣೆಯಾಗಲಿದ್ದು, ಪ್ರತಿ ಎಕರೆ ಖುಷ್ಕಿ ಜಮೀನಿಗೆ ₹25 ಲಕ್ಷ, ನೀರಾವರಿ ಜಮೀನಿಗೆ ₹26 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಅದೇ ರೀತಿ ಸಣ್ಣ ನೀರಾವರಿ ಇಲಾಖೆಯ ಮೂಲಕ ತಾಲ್ಲೂಕಿನ ಇನ್ನೂ 16 ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದ್ದು, ಕೊಳವೆ ಜೋಡಣೆಗೆ ಅಡೆ ತಡೆಯಾಗಿದೆ. ಇನ್ನೂ 9 ಕಿ.ಮೀ ಕೊಳವೆ ಜೋಡಿಸಿದರೆ ಎಲ್ಲ ಕೆರೆಗಳಿಗೆ ನೀರು ಹರಿಯಲಿದೆ. ಆದರೆ ಕೆಬಿಜೆಎನ್‌ಎಲ್‌ ಯೋಜನೆಯಲ್ಲಿ ರೈತರಿಗೆ ಪರಿಹಾರ ನೀಡಲಾಗಿದ್ದರೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೈಗೊಳ್ಳುವ ಯೋಜನೆಯಲ್ಲಿ ರೈತರಿಗೆ ಪರಿಹಾರ ನೀಡದ ಸರ್ಕಾರದ ನೀತಿ ತಪ್ಪಾಗಿದ್ದು ಈ ವಿಷಯದಲ್ಲಿ ಪತ್ರ ಬರೆದಿರುವುದಾಗಿ ಹೇಳಿದರು.ಕೆಬಿಜೆಎನ್‌ಎಲ್‌ ಕಾರ್ಯಪಾಲಕ ಎಂಜಿನಿಯರ್ ಆರ್‌.ಡಿ.ಬಿರಾದಾರ, ಎಇಇ ರಮೇಶ್‌, ಎಇ ಅಶೋಕ ನಾಯಕ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ, ಕಾಂಗ್ರೆಸ್‌ ಪಕ್ಷದ ಪ್ರಮುಖರು, ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.