ADVERTISEMENT

ದಾನಪತ್ರದ ಮೂಲಕ ಆಸ್ತಿ ಬರೆಸಿಕೊಂಡು ವಯಸ್ಸಾದ ತಾಯಿಯನ್ನೇ ಬೀದಿಪಾಲಾಗಿಸಿದ ಮಕ್ಕಳು!

ವಯಸ್ಸಾದ ಮಹಿಳೆಯ ಆಸ್ತಿ ಹಿಂದುರಿಗಿಸಿ ಉಪವಿಭಾಗಾಧಿಕಾರಿ ಆದೇಶ 

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 12:37 IST
Last Updated 1 ಆಗಸ್ಟ್ 2021, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ‘ವಯಸ್ಸಾದ ತಾಯಿಯನ್ನು ಪುಸಲಾಯಿಸಿ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ದಾನಪತ್ರದ ಹೆಸರಿನಲ್ಲಿ ತನ್ನ ಹೆಸರಿಗೆ ಬರೆಸಿಕೊಂಡು, ನಂತರ ಬೀದಿ ಪಾಲು ಮಾಡಿದ್ದ ಮಗಳಿಗೆ, ಆಸ್ತಿಯನ್ನು ಮರಳಿ ತಾಯಿಗೆ ನೀಡುವಂತೆ ಉಪವಿಭಾಗಾಧಿಕಾರಿ ಆದೇಶ ನೀಡಿರುವ ಅಪರೂಪದ ಪ್ರಕರಣಕ್ಕೆ ಜಿಲ್ಲಾಡಳಿತ ಸಾಕ್ಷಿಯಾಗಿದೆ.

ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿ ಹೊಸ ಕಾನೂನಿನ ಅನ್ವಯ ವೃದ್ಧ ಪಾಲಕರನ್ನು ನೋಡಿಕೊಳ್ಳದೆ ಆಸ್ತಿ ಆಸೆಗೆ ಬೀದಿಪಾಲು ಮಾಡುವ ಮಕ್ಕಳಿಗೆ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರ ಆದೇಶ ಬಿಸಿ ಮುಟ್ಟಿಸಿದ್ದು, ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ.

ಪ್ರಕರಣದ ವಿವರ: ಜಿಲ್ಲೆಯ ಕುಕನೂರು ತಾಲ್ಲೂಕಿನ ಎಚ್.ಜಿ.ರಾಮುಲು ನಗರದ ನಿವಾಸಿ ಬಸಮ್ಮ ನಿಂಗಪ್ಪ ತಳವಾರ ಎಂಬುವರ ಹೆಸರಿನಲ್ಲಿ ಮನೆ ಮತ್ತುಬಯಲು ಜಾಗೆ ಇತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರುಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಪುತ್ರ ಇದ್ದರು. ಮೂವರು ಮದುವೆಯಾಗಿ ಬೇರೆಡೆ ವಾಸ ಮಾಡುತ್ತಿದ್ದರು.

ADVERTISEMENT

ವೃದ್ಧೆ ತಾಯಿ ಬಸಮ್ಮಳಿಗೆ ಹಿರಿಯ ಮಗಳು ಮತ್ತು ಎರಡನೇ ಮಗಳ ಗಂಡ ಪಿಂಚಣಿ ಸೌಲಭ್ಯ ಕೊಡಿಸುತ್ತೇನೆ ಎಂದು ಪುಸಲಾಯಿಸಿ ನಕಲಿ ಕಾಗದಗಳನ್ನು ತಯಾರಿಸಿ ಆಸ್ತಿ ದಾನಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು. ಮೋಸ ಮಾಡಿದ್ದಲ್ಲದೆ ಚಿತ್ರಹಿಂಸೆ ನೀಡಿ ಮನೆ, ಜಾಗ ನಮ್ಮ ವಶಕ್ಕೆ ಬಂದಿದ್ದು, ಮನೆಯಿಂದ ಹೊರಗೆ ಹೋಗುವಂತೆ ಪೀಡಿಸಿದರು. ಈ ಕುರಿತು ಸಂಬಂಧಿಸಿದ ಕಚೇರಿಗೆ ಹೋದಾಗ ಖರೀದಿ ಅವರಿಗೆ ಆಗಿದ್ದು, ನಾವು ಏನು ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರಾಕರಿಸಿದ್ದರು.

ಇದರಿಂದ ವೃದ್ಧೆಯು ಮಕ್ಕಳಿಂದ ಮೋಸ ಹೋಗಿ ಬೀದಿಪಾಲಾಗಿ ಗ್ರಾಮದ ದ್ಯಾಂಪುರ ಕ್ರಾಸ್‌ ಹತ್ತಿರ ಇರುವ ಭೀಮವ್ವ ದೇವಸ್ಥಾನದಲ್ಲಿ ಆಶ್ರಯ ಪಡೆದು, ಅಲ್ಲಿನ ನಿವಾಸಿಗಳು ಕೊಡುವ ಊಟ ಸೇವಿಸಿ, ನಿತ್ಯ ಪರದಾಟ ನಡೆಸುತ್ತಿದ್ದರು.

ಈ ಕುರಿತು ಹಿರಿಯ ನಾಗರಿಕರ ಕಲ್ಯಾಣ ವೇದಿಕೆಯ ಕೆಲವು ಸದಸ್ಯರು ಉಪವಿಭಾಧಿಕಾರಿ ಅವರ ಗಮನಕ್ಕೆ ತಂದಿದ್ದರು. ವಿಚಾರಣೆ ಕೈಗೆತ್ತಿಕೊಂಡ ಉಪವಿಭಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ವೃದ್ಧೆ ಬಸಮ್ಮಳ ಹೇಳಿಕೆ ದಾಖಲಿಸಿಕೊಂಡಿದ್ದರು.

ಅವರ ಮಕ್ಕಳನ್ನು ಕರೆಸಿ ವಿಚಾರಣೆ ನಡೆಸಿದಾಗ, 'ನಮ್ಮ ತಾಯಿಯೇ ದಾನ ನೀಡಿದ್ದು, ಪತ್ರಕ್ಕೆ ಸಹಿ ಹಾಕಿರುವುದಾಗಿ ತಿಳಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಎಸಿ, 'ಎಲ್ಲ ಆಸ್ತಿಪತ್ರ ಸರಿಯಿದೆ. ಆದರೆ ಹಿರಿಯ ನಾಗರಿಕಳಾದ ತಾಯಿಯನ್ನು ಸಂರಕ್ಷಣೆ ಮಾಡದೇ ಇರುವುದು ಅಪರಾಧ' ಎಂದು ನಿರ್ಣಯಿಸಿ ದಾನಪತ್ರ ರದ್ದುಪಡಿಸಿ ಆಸ್ತಿಯು ಮರಳಿ ವೃದ್ಧೆಗೆ ಸೇರುವಂತೆ ಆದೇಶ ನೀಡಿದ್ದು, ಈ ಹೊಸ ಕಾನೂನಿಗೆ ಬಲಬಂದಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.