ಕೊಪ್ಪಳ: ಕುಕನೂರು ತಾಲ್ಲೂಕಿನ ಭಾನಾಪುರ ಬಳಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪುಟ್ಟರಾಜು ಹಲಗೇರಿ (7) ಹಾಗೂ ಭೂಮಿಕಾ ಹಲಗೇರಿ (5) ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ಸೋಮವಾರ ಸ್ಥಳಾಂತರಿಸಲಾಗಿದೆ.
ಇನ್ನುಳಿದ ಪಲ್ಲವಿ ಕರಿಗಾರ (20) ಅವರಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಅಧಿಕಾರಿಗಳ ಭೇಟಿ: ಅಪಘಾತದಲ್ಲಿ ತಾಯಿ ಮೃತಪಟ್ಟಿದ್ದರಿಂದ ಅನಾಥರಾದ ಮಕ್ಕಳ ಮನೆಗೆ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು.
ಯಲಬುರ್ಗಾ ತಾಲ್ಲೂಕಿನ ಸಿಡಿಪಿಒ ಸಿಂಧು ಯಲಿಗಾರ, ವಲಯ ಮೇಲ್ವಿಚಾರಕಿಯರಾದ ರಾಧಿಕಾ ಪವಾರ್, ಮಾಧವಿ ವೈದ್ಯ ಅವರು ಬಿನ್ನಾಳ ಗ್ರಾಮಕ್ಕೆ ತೆರಳಿ 10 ವರ್ಷದ ಬಸವರಾಜಗೆ ಧೈರ್ಯ ತುಂಬಿದರು.
ಅಪಘಾತದಲ್ಲಿ ಪಾರವ್ವ ಹಲಗೇರ ಮೃತಪಟ್ಟಿದ್ದಾರೆ. ಇವರ ಪತಿ ಬೀರಪ್ಪ ಹೋದ ವರ್ಷ ತೀರಿಕೊಂಡಿದ್ದರು. ಈ ದಂಪತಿಗೆ ಬಸವರಾಜ, ಪುಟ್ಟರಾಜ ಮತ್ತು ಭೂಮಿಕಾ ಎನ್ನುವ ಮೂರು ಜನ ಮಕ್ಕಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.