ಗಂಗಾವತಿ: ನಗರದ ಮಲ್ಲಿಕಾರ್ಜುನ ಮಠದ ಆವರಣದಲ್ಲಿ ಶನಿವಾರ ಹಾನಗಲ್ಲ ಕುಮಾರ ಶಿವಯೋಗಿಗಳ 158ನೇ ಜಯಂತ್ಯೋತ್ಸವದ ಸಮಾರೋಪ ಸಮಾರಂಭ ಜರು ಗಿತು.
ಕುದರಿಮೊತಿ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ‘ಕುಮಾರೇಶ್ವರರು ತಮಗಾಗಿ ಏನೂ ಮಾಡಿಕೊಳ್ಳದೇ ಎಲ್ಲವನ್ನೂ ಸಮಾಜಕ್ಕಾಗಿ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಓಡಾಡಿ ಜನರಿಗೆ ಶಿಕ್ಷಣ ನೀಡಿದರು. ಶಿವಯೋಗ ಮಂದಿರ ಸ್ಥಾಪಿಸಿದರು. ಸಮಾಜಕ್ಕೆ ಅವರ ಕೊಡುಗೆ ಅಪಾರ’ ಎಂದರು.
ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ‘ಕುಮಾರೇಶ್ವರರು ಮೈಸೂರಿನ ಬಳಿ 12 ವರ್ಷ ತಪಸ್ಸು ಮಾಡಿದ್ದಾರೆ ಎಂದು ಓದಿದ್ದೇನೆ. ಅವರು ತಮ್ಮ ಸ್ವಾರ್ಥಕ್ಕೆ ತಪಸ್ಸು ಮಾಡಲಿಲ್ಲ, ಸಮಾಜಕ್ಕೆ ಶಿಕ್ಷಣ ನೀಡಲೆಂದು ತಪಸ್ಸು ಮಾಡಿದರು’ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ‘ಕುಮಾರೇಶ್ವರರ ಜಯಂತಿ ಕೇವಲ ಧಾರ್ಮಿಕ ಕೆಲಸಕ್ಕೆ ಸೀಮಿತವಾಗಿಲ್ಲ. ಬದಲಾಗಿ ಯುವಕರನ್ನು ದುಶ್ಚಟಗಳಿಂದ ದೂರ ಮಾಡುವ ಕೆಲಸ ಮಾಡಿದ್ದು ಶ್ಲಾಘನೀಯ’ ಎಂದರು.
ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು. ಬೆಳಿಗ್ಗೆ ನಗರದದಲ್ಲಿ ಸ್ವಾಮೀಜಿಗಳಿಂದ ಸದ್ಭಾವನ ಯಾತ್ರೆ ಜರುಗಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ವೀರಪ್ಪ ಸೇರಿ ವಿವಿಧ ಮಠಗಳ ಮಠಾಧೀಶರು, ಸಮಾಜದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.