
ಕುಷ್ಟಗಿಯ ದೇಸಾಯಿ ಬಡಾವಣೆಯಲ್ಲಿನ ಮೆಟ್ರಿಕ್ಪೂರ್ವ ಬಾಲಕಿಯರ ಹಾಸ್ಟೆಲ್ ಬಳಿ ಕುಡಿದು ಬಿಸಾಡಿದ ಮದ್ಯದ ನೂರಾರು ಖಾಲಿ ಬಾಟಲಿ, ಪಾಕೇಟ್ಗಳು ಬಿದ್ದಿರುವುದು
ಕುಷ್ಟಗಿ: ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿನ ದೇಸಾಯಿ ಬಡಾವಣೆ ಬಳಿವಿರುವ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಬಳಿಯ ಪ್ರದೇಶವು ಮದ್ಯ ವ್ಯಸನಿ ಹಾಗೂ ಕಿಡಿಗೇಡಿಗಳ ತಾಣವಾಗಿದೆ.
ಹಾಸ್ಟೆಲ್ ಹಿಂಭಾಗದ ಖಾಲಿ ಪ್ರದೇಶದಲ್ಲಿ ಮುಳ್ಳುಕಂಟಿಗಳು ಬೆಳೆದು ಕಾಡಿನಂತಾಗಿದೆ. ಪಕ್ಕದಲ್ಲಿ ಸಾಯಿಬಾಬಾ ಮಂದಿರವಿದ್ದು ಮಧ್ಯದಲ್ಲಿ ದ್ಯಾಮಮ್ಮದೇವಿ ಕಟ್ಟೆ ಇದೆ. ಅಲ್ಲಿ ಮದ್ಯ, ಮಾದಕ ವ್ಯಸನಿಗಳು, ಕಿಡಿಗೇಡಿ ಯುವಕರ ಗುಂಪು ನೆರೆದಿರುತ್ತದೆ. ದ್ಯಾಮಮ್ಮನ ಕಟ್ಟೆಯ ಸುತ್ತಲೂ ಕುಡಿದು ಬಿಸಾಡಿದ ಖಾಲಿ ಪಾಕೇಟ್, ಬಾಟಲಿಗಳು, ಸಿಗರೇಟ್ಗಳ ರಾಶಿ ಕಾಣಬಹುದು.
ಒಂದೆಡೆ ಮುಳ್ಳುಕಂಟಿಯ ಕಾಡು, ಇನ್ನೊಂದೆಡೆ ಪುಂಡರ, ಕುಡುಕರು ಆವಾಸ. ಬಾಲಕಿಯರ ಹಾಸ್ಟೆಲ್ ಕಿಟಕಿಗಳತ್ತ ವಸ್ತುಗಳನ್ನು ಎಸೆಯುವುದು, ಅಶ್ಲೀಲವಾಗಿ ಮಾತನಾಡುವುದು ಸಾಮಾನ್ಯವಾಗಿದೆ. ಇಲ್ಲಿ ಯಾರು ಯಾವುದೇ ಹೊತ್ತಿನಲ್ಲಿ ಬಂದು ಕುಳಿತುಕೊಂಡರೂ ಕೇಳುವವರಿಲ್ಲ. ಆತಂಕಕಾರಿ ಪರಿಸರದ ಮಧ್ಯೆ ವಿದ್ಯಾರ್ಥಿನಿಯರು ಕಾಲ ಕಳೆಯುವಂತಾಗಿದೆ.
ಅಲ್ಲದೆ ಹಾಸ್ಟೆಲ್ ಆವರಣ ಗೋಡೆ ಕೇವಲ ಐದು ಅಡಿ ಎತ್ತರವಾಗಿದ್ದು, ಯಾವುದೇ ವ್ಯಕ್ತಿ ಸುಲಭದಲ್ಲಿ ಗೋಡೆ ಹಾರಬಹುದು. ಗೋಡೆ ಎತ್ತರಿಸುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ವಕೀಲ ವೈ.ಜೆ. ಪೂಜಾರ, ಕುಮಾರ ಬಡಿಗೇರ, ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಸಮಸ್ಯೆ ಇರುವ ಬಗ್ಗೆ ವಿದ್ಯಾರ್ಥಿನಿಯರು ತಮಗೆ ಹೇಳಿಲ್ಲ ಎಂದು ಹಾಸ್ಟೆಲ್ ಅಧೀಕ್ಷಕಿ ಶಾಂತಮ್ಮ ಪ್ರತಿಕ್ರಿಯಿಸಿದರು.
‘ಹಾಸ್ಟೆಲ್ ಸುತ್ತಲಿನ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ನಡೆದಿರುವುದು ಗಮನಕ್ಕೆ ಬಂದಿಲ್ಲ. ಅಲ್ಲದೆ ಬಾಲಕಿಯರೂ ಮಾಹಿತಿ ನೀಡಿಲ್ಲ. ಆದರೂ ಪರಿಶೀಲಿಸಿ ಹಾಸ್ಟೆಲ್ ಸುತ್ತಲಿನ ಪ್ರದೇಶದಲ್ಲಿ ಕಿಡಿಗೇಡಿಗಳಿಗೆ ಅವಕಾಶ ನಿರ್ಬಂಧಿಸುವಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತೇವೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಬಸವರಾಜ ನೆಲಗಣಿ ಪ್ರಜಾವಾಣಿಗೆ ತಿಳಿಸಿದರು
ಸಾಯಿ ಭಕ್ತರಿಗೂ ತಪ್ಪದ ಗೋಳು: ದ್ಯಾಮಮ್ಮನ ಕಟ್ಟೆಗೆ ಹೊಂದಿಕೊಂಡೇ ಶಿರಡಿ ಸಾಯಿ ಮಂದಿರವಿದೆ. ಅಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಭಕ್ತರು ಬರುತ್ತಾರೆ. ಮದ್ಯವ್ಯಸನಿಗಳು ಹಾದಿ ಬೀದಿಯಲ್ಲಿ ಅಸಹ್ಯತನದಿಂದ ವರ್ತಿಸುತ್ತಿರುವುದು, ಕುಡಿದು ಅಲ್ಲಿಯೇ ಬಿದ್ದಿರುವುದು ಸಾಕಷ್ಟು ಕಿರಿಕಿರಿ ತಂದೊಡ್ಡಿದೆ ಎನ್ನುತ್ತಾರೆ ಸ್ಥಳಿಯ ನಿವಾಸಿಗಳುಬಾಲಕಿಯರ ಹಾಸ್ಟೆಲ್ ಸುತ್ತ ಉಪಟಳ ನಡೆಸುವ ಮದ್ಯವ್ಯಸನಿಗಳ ಮೇಲೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಹರೆ ಹೆಚ್ಚಿಸಲು ಪೊಲೀಸ್ ಇಲಾಖೆಗೆ ಪತ್ರ ಬರೆಯುತ್ತೇವೆ. ಬಸವರಾಜ ನೆಲಗಣಿಬಿಸಿಎಂ ಅಧಿಕಾರಿ
ಹಾಸ್ಟೆಲ್ ಸುತ್ತ ಕಿಡಿಗೇಡಿಗಳ ಉಪಟಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆವರಣ ಗೋಡೆ ಎತ್ತರಿಸುವುದು ಸೂಕ್ತವೈ.ಜೆ.ಪೂಜಾರ, ವಕೀಲ
ಬಾಲಕಿಯರ ಹಾಸ್ಟೆಲ್ ಸುತ್ತ ಉಪಟಳ ನಡೆಸುವ ಮದ್ಯವ್ಯಸನಿಗಳ ಮೇಲೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಹರೆ ಹೆಚ್ಚಿಸಲು ಪೊಲೀಸ್ ಇಲಾಖೆಗೆ ಪತ್ರ ಬರೆಯುತ್ತೇವೆ.ಬಸವರಾಜ ನೆಲಗಣಿ, ಬಿಸಿಎಂ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.