ಕುಷ್ಟಗಿ: ಪ್ರಾರಂಭದಲ್ಲಿ ಮುಂಗಾರು ಹಂಗಾಮಿನ ಮಳೆ ಬಹಳಷ್ಟು ನಿರೀಕ್ಷೆ ಹುಟ್ಟಿಸಿತ್ತು. ಸಕಾಲದಲ್ಲಿ ಮಳೆಯಾಗಿದ್ದರಿಂದ ಖುಷಿಯಲ್ಲಿದ್ದ ರೈತರು ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆಗಳ ಬಿತ್ತನೆ ನಡೆಸಿದ್ದು, ಬೆಳೆಗಳೂ ಉತ್ತಮ ರೀತಿಯಲ್ಲಿವೆ. ಆದರೆ, ತೇವಾಂಶದ ಕೊರತೆ ಎದುರಾಗಿದ್ದು ರೈತರು ಮತ್ತೆ ಮಳೆರಾಯನ ನಿರೀಕ್ಷೆಯಲ್ಲಿದ್ದಾರೆ.
ಎರಡು ವಾರದ ಹಿಂದೆ ಪ್ರಖರ ಬಿಸಿಲು ಇದ್ದರೆ ಒಂದು ವಾರದಿಂದ ಮೋಡಗಳು ಗಾಳಿಗೆ ಸರಿದು ಹೋಗುತ್ತಿವೆ, ಮಳೆ ನಿತ್ಯ ಅತಿಥಿಯಂತೆಯೇ ಅನಿಸುತ್ತಿದೆಯಾದರೂ ಮೇಲ್ಮೈ ಮಣ್ಣು ಸಹ ತೇವಗೊಂಡಿಲ್ಲ. ವಾತಾವರಣದಲ್ಲಿ ಆರ್ದ್ರತೆ ಇದ್ದರೂ ಭೂಮಿಯಲ್ಲಿ ಮಾತ್ರ ತೇವಾಂಶದ ಕೊರತೆ ಇಲ್ಲ. ಆಷಾಢ ಮಾಸ ಬರುವ ಮೊದಲೇ ಬಿರುಗಾಳಿ ಬೀಸಿ ಮಳೆ ಕ್ಷೀಣಿಸುವಂತೆ ಮಾಡಿದೆ. ಈ ಕಾರಣಕ್ಕೆ ಕುಷ್ಟಗಿ ಸೇರಿದಂತೆ ಸುತ್ತಲಿನ ತಾಲ್ಲೂಕುಗಳ ಬೆಳೆಗಳು ಬಾಡುತ್ತಿರುವುದರಿಂದ ರೈತರಲ್ಲಿ ಆತಂಕ ಆವರಿಸಿದೆ.
ಮಳೆ ಬೆಳೆ ಕುರಿತಂತೆ ಟೆಂಗುಂಟಿ ಗ್ರಾಮದ ಹಿರಿಯ ರೈತ ಹನುಮಗೌಡ ಪಾಟೀಲ ಹೇಳುವಂತೆ,‘ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುವುದು ಸಾಮಾನ್ಯ ಎನ್ನುವಂತಾಗಿದೆ. ಕೆಲ ವರ್ಷಗಳ ಹಿಂದೆ ಮಳೆಯಾಗದೆ ಮುಂಗಾರು ಬಿತ್ತನೆಯಾಗಿರಲಿಲ್ಲ. ಆಗ ಮಳೆ ಬರಲಿಲ್ಲ ಎನ್ನುವ ಚಿಂತೆ, ಈಗ ಬಿತ್ತನೆಯಾದರೂ ಬೆಳವಣಿಗೆ ಹಂತದಲ್ಲಿ ಮಳೆ ಕೈಕೊಟ್ಟಿದೆ. ಇನ್ನು ಒಂದು ವಾರದ ಒಳಗೆ ಮಳೆಯಾಗದಿದ್ದರೆ ಬೆಳೆಗಳು ಕೈ ತಪ್ಪುತ್ತವೆ. ಮಳೆಯಾಗಲಿ ಆಗದಿರಲಿ ರೈತರಿಗೆ ಚಿಂತೆ ತಪ್ಪುತ್ತಿಲ್ಲ’ ಎಂದು ನೋವು ತೋಡಿಕೊಂಡರು.
ಮೆಕ್ಕೆಜೋಳ, ಸಜ್ಜೆ, ತೊಗರಿ, ಶೇಂಗಾ ಮತ್ತು ಅಲ್ಪಾವಧಿ ಬೆಳೆಗಳಾದ ಎಳ್ಳು, ಹೆಸರು ಹೀಗೆ ವಿವಿಧ ಬೆಳೆಗಳು ತಿಂಗಳ ಅವಧಿಯಲ್ಲಿದ್ದು ಸದ್ಯ ಉತ್ತಮವಾಗಿವೆ. ಈಗಲಾದರೂ ಮಳೆಯಾದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು ಎನ್ನುತ್ತಾರೆ ರೈತರು.
‘ಹೆಸರು ಬೆಳೆ ಅತ್ಯುತ್ತಮವಾಗಿವೆ, ತೇವಾಂಶ ಕೊರತೆ ಎದುರಾಗಿದ್ದು ಅಂತರ ಬೇಸಾಯ ಕೈಗೊಳ್ಳುವ ಮೂಲಕ ತೇವಾಂಶ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಇನ್ನೂ ಕಾಲ ಮಿಂಚಿಲ್ಲ ಮಳೆಯಾಗುವ ನಿರೀಕ್ಷೆ ಇದೆ’ ಎಂದು ನೆರೆಬೆಂಚಿ ರೈತ ಮಾನಪ್ಪ ಗದ್ದಿ ಹೇಳಿದರು.
ಬಿತ್ತನೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆದರೆ ಮಳೆಯಿಲ್ಲದೆ ಬೆಳೆಗಳು ತೇವಾಂಶ ಕೊರತೆಯಿಂದ ಬಾಡುತ್ತಿವೆ. ವಾರದೊಳಗೆ ಮಳೆಯಾದರೆ ಮಾತ್ರ ಅನುಕೂಲ.ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ.
ಸದ್ಯ ತೇವಾಂಶ ಕೊರತೆ ಇರಬಹುದು. ಆದರೆ ಇಂದಲ್ಲ ನಾಳೆ ಮಳೆಯಾಗುವ ಆಶಾಭಾವನೆ ಇದ್ದು ನಿರಾಶೆಗೊಳಗಾಗುವ ಅಗತ್ಯವಿಲ್ಲ.ಮಾನಪ್ಪ ಗದ್ದಿ ನೆರೆಬೆಂಚಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.