ಕೊಪ್ಪಳ: ಕಷ್ಟದಲ್ಲಿದ್ದಾಗ, ತೊಂದರೆಯಲ್ಲಿದ್ದಾಗ ಸಹಾಯಕ್ಕೆ ಬರುವವರು ಎಲ್ಐಜಿ ಪ್ರತಿನಿಧಿಗಳಾಗಿದ್ದಾರೆ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಮಳೆಮಲ್ಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಜೀವ ವಿಮಾ ಪ್ರತಿನಿಧಿಗಳ ಸಂಘದ ವತಿಯಿಂದ ನಡೆದ ರಾಯಚೂರು ವಿಭಾಗೀಯ ಪ್ರತಿನಿಧಿಗಳ (ಲಿಯಾಫಿ) ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಂಧು–ಬಳಗದವರು, ಸ್ನೇಹಿತರು ಹಣವಿದ್ದಾಗ ಮಾತ್ರ ಬರುತ್ತಾರೆ. ಸುಖದಲ್ಲಿ ಮಾತ್ರ ಭಾಗಿಯಾಗುತ್ತಾರೆ. ಆದರೆ ತೊಂದರೆ ಇದ್ದಾಗ ಬಂದು ಹಣಕಾಸಿನ ಸಹಾಯ ಮಾಡುವವರು ಎಲ್ಐಸಿ ಪ್ರತಿನಿಧಿಗಳು. ಈ ಮೂಲಕ ಪ್ರತಿ ಕುಟುಂಬಕ್ಕೆ ಸಾಮಾಜಿಕ ಭದ್ರತೆ ಒದಗಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಬಡವ ಮತ್ತು ಶ್ರೀಮಂತ ಎನ್ನುವ ಬೇಧ–ಭಾವ ನೋಡದೇ ಎಲ್ಲರಿಗೂ ಪಾಲಿಸಿ ಮಾಡಿಸುತ್ತಾರೆ. ಎಲ್ಐಸಿ ಪ್ರತಿನಿಧಿಗಳು ಎಂದರೆ ನಿಷ್ಠಾವಂತರಾಗಿದ್ದಾರೆ ಎಂದರು.
ಜೀವ ವಿಮಾ ಪ್ರತಿನಿಧಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ದೇವಿಶಂಕರ ಶುಕ್ಲಾ ಮಾತನಾಡಿ, ಪ್ರತಿನಿಧಿಗಳ ಎಲ್ಐಸಿ ಪ್ರೀಮಿಯಮ್ಗಳ ಮೇಲೆ ವಿಧಿಸುತ್ತಿರುವ ಜಿಎಸ್ಟಿಯನ್ನು ತೆಗೆಯಬೇಕು. ಎಲ್ಐಸಿ ಸಿಬ್ಬಂದಿಗೆ ಇರುವಂತೆ ಪ್ರತಿನಿಧಿಗಳ ಈಗಿರುವ ಗ್ರ್ಯಾಚುವಿಟಿಯನ್ನು 20 ಲಕ್ಷಕ್ಕೆ ಹೆಚ್ಚಿಸಬೇಕು. ಈ ಮೂಲಕ ಸಿಬ್ಬಂದಿಗೆ ಸಮನಾಗಿ ಪ್ರತಿನಿಧಿಗಳಿಗೂ ಗ್ರ್ಯಾಚೂಟಿ ನೀಡಬೇಕು. ಬೋನಸ್ ಹಣವನ್ನು ಹೆಚ್ಚಿಸಬೇಕು. ಮೆಡಿಕ್ಲೈಮ್ ಸೌಲಭ್ಯವನ್ನು ಪ್ರತಿನಿಧಿಗಳ ತಂದೆ–ತಾಯಿ ಮತ್ತು ಮಕ್ಕಳಿಗೂ ವಿಸ್ತರಿಸಬೇಕು. ಪ್ರತಿನಿಧಿಗಳ ಮಕ್ಕಳ ವ್ಯಾಸಂಗಕ್ಕೆ ಸಾಲಸೌಲಭ್ಯ ನೀಡಬೇಕು. ಅಲ್ಲದೇ ಪ್ರಾವಿಡೆಂಟ್ ಫಂಡ್ (ಪಿಎಫ್) ಸೌಲಭ್ಯ ಕಲ್ಪಿಸಬೇಕು. ಈ ಮೂಲಕ ಪ್ರತಿನಿಧಿಗಳ ಅವಿರತ ಶ್ರಮಕ್ಕೆ ಸಹಕಾರ ನೀಡಬೇಕು ಎಂದರು.
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ ನಾಡಗೌಡ ಮಾತನಾಡಿ, ಪ್ರತಿನಿಧಿಗಳು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಐಸಿ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಅಂದಾಗ ಮಾತ್ರ ನಮ್ಮ ಬೇಡಿಕೆಗಳನ್ನು ಹಾಗೂ ಕಾರ್ಯಗಳನ್ನು ಸುಮಗವಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ವೇದಿಕೆ ಮೇಲಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ಬಳಿಕ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.ಎಲ್ಐಸಿ ರಾಯಚೂರು ಹಿರಿಯ ವಿಭಾಗೀಯ ಅಧಿಕಾರಿ ಕೆ.ಆರ್.ವೆಂಕಟೇಶಪ್ರಸಾದ, ಮಾರುಕಟ್ಟೆ ಪ್ರಬಂಧಕ ಎಂ.ಸುಬ್ರಮಣಿಯನ್, ಜಿಲ್ಲಾ ಶಾಖಾಧಿಕಾರಿ ದಾಲಾ ರಾಮರಾವ್, ಸಹಾಯಕ ವ್ಯವಸ್ಥಾಪಕ ಶಿವ ಕರಕೊಂಡಾ, ಸಂಘಟನೆಯ ಕೆ.ಮಲ್ಕಾಜಯ, ಕೆ.ತಿರುಮಲರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.