ಚನ್ನಪಟ್ಟಣ: ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಶಕ್ತ ದೇಶ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಪ್ರಮುಖವಾದುದು ಎಂದು ಕುಂಬಾರ ಮಹಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕೆ. ತಿಮ್ಮಪ್ಪರಾಜು ಹೇಳಿದರು.
ಪಟ್ಟಣದ ಶ್ರೀ ಲಕ್ಷ್ಮಿ ಆಸ್ಪತ್ರೆ ಆವರಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಬ್ಬೂರು ಎಂ.ಶ್ರೀನಿವಾಸು ಅವರ ಹಾಲ್ಗಂಬ ಕವನ ಸಂಕಲನ ಬಿಡುಗಡೆ ಹಾಗೂ ಸಣ್ಣ ಕಥೆಗಳ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೇಲುಕೀಳೆಂಬ ತಾರತಮ್ಯಗಳನ್ನು ಹೋಗಲಾಡಿಸಲು ಸಾಹಿತ್ಯ ದಾರಿದೀಪ. ಸಾಹಿತ್ಯದ ಮೂಲಕ ಮಾನವ ಸಂಬಂಧಗಳನ್ನು ಬೆಸೆಯಲು ಬರಹಗಾರರು ಮುಂದಾಗಬೇಕು. ಸಮಾಜದ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನವಿರಲಿ. ಸಾಹಿತ್ಯ ಎಂದಿಗೂ ಜೀವ ವಿರೋಧಿಯಾಗಬಾರದು. ಪ್ರಸ್ತುತ ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ. ಶಿವಮಾದು ಮಾತನಾಡಿ, ಸಾಹಿತ್ಯ ಸಮಾಜದ ಪ್ರತಿಬಿಂಬ. ಯಾವುದೇ ಕಾಲದ ಕವಿ ತನ್ನ ಕಾಲದ ವಿದ್ಯಮಾನಗಳನ್ನು ಸಾಹಿತ್ಯದ ಮೂಲಕ ಕಟ್ಟಿಕೊಡುತ್ತಾನೆ. ಸಕಾರಾತ್ಮಕ ಆಲೋಚನೆಗಳನ್ನು ಬಿತ್ತುವ ಮೂಲಕ ಒಡೆದ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಸಾಹಿತಿ ನಿರ್ವಹಿಸುತ್ತಾನೆ. ಪ್ರಾಸಕ್ಕೆ ಕಟ್ಟುಬೀಳದೆ, ತಮ್ಮ ಅನುಭವಗಳನ್ನು ಬರಹವಾಗಿಸಬೇಕು ಎಂದರು.
ಹಿರಿಯ ಸಾಹಿತಿ ಎಲೆಕೇರಿ ಶಿವರಾಂ ಮಾತನಾಡಿ, ಜನಮಾನಸದಲ್ಲಿ ಗಟ್ಟಿಯಾಗಿ ನಿಲ್ಲುವ, ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಾದ ಸಾಹಿತ್ಯ ರಚನೆಯಾಗಬೇಕು. ಕವಿಯಾಗುವವನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಸಾಹಿತಿ ಡಾ.ಅಂಕನಹಳ್ಳಿ ಪಾರ್ಥ ಅಧ್ಯಕ್ಷತೆ ವಹಿಸಿದ್ದರು. ಯುವ ಕವಿ ಅಬ್ಬೂರು ಶ್ರೀನಿವಾಸ್, ಶ್ರೀ ಲಕ್ಷ್ಮಿ ಆಸ್ಪತ್ರೆಯ ವ್ಯವಸ್ಥಾಪಕ ಆರ್.ಎಸ್.ಸಿದ್ದಯ್ಯ ಮಾತನಾಡಿದರು. ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ವಿಜಯ್ ರಾಂಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಣ್ಣ ಕಥೆಗಳ ಗೋಷ್ಠಿಯಲ್ಲಿ ಎಲೆಕೇರಿ ರಾಜಶೇಖರ್, ಚಕ್ಕೆರೆ ಯೋಗೇಶ್, ಶ್ರೀನಿವಾಸ್ ರಾಂಪುರ, ಯೋಗೇಶ್ ದ್ಯಾವಪಟ್ಟಣ, ಮಂಜೇಶ್ ಬಾಬು, ಸಚಿನ್ ಕೆಲಗೆರೆ, ಲಕ್ಷ್ಮಿ ಕಿಶೋರ್ ಅರಸು, ಮೇದರಹಟ್ಟಿ ಹನುಮಂತು, ತುಂಬೇನಹಳ್ಳಿ ಕಿರಣ್ ರಾಜ್, ಕುಮಾರಿ ಸಂಧ್ಯಾ, ದರ್ಶನ್ ಗೌಡ ಶೆಟ್ಟಿಹಳ್ಳಿ, ಗುನ್ನೂರು ಚೇತನ್, ತುಳಸೀಧರ ಭಾಗವಹಿಸಿದ್ದರು.
ಜನಪದ ಗಾಯಕ ಬೇವೂರು ರಾಮಯ್ಯ ಗೀತಗಾಯನ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.