ADVERTISEMENT

ಮಾವು ಬೆಳೆ: ಮಾರಾಟಕ್ಕೆ ತೊಂದರೆ, ಕೊರೊನಾ ಕಾರಣ ರೈತರಿಗೆ ಸಂಕಷ್ಟ

ಹಣ್ಣುಗಳನ್ನು ತಿನ್ನುವ ಕಾಡು ಪ್ರಾಣಿಗಳು:

ಸಿದ್ದನಗೌಡ ಪಾಟೀಲ
Published 4 ಮೇ 2021, 4:55 IST
Last Updated 4 ಮೇ 2021, 4:55 IST
ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದ ಹಿರೇಮಾದಿನಾಳದ ಗ್ರಾಮದ ಭಜಂತ್ರಿ ಸಹೋದರರು ಬೆಳೆದ ಮಾವು
ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದ ಹಿರೇಮಾದಿನಾಳದ ಗ್ರಾಮದ ಭಜಂತ್ರಿ ಸಹೋದರರು ಬೆಳೆದ ಮಾವು   

ಕೊಪ್ಪಳ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರ 14 ದಿನ ಲಾಕ್‌ಡೌನ್‌ ಮಾಡಿದ್ದು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ.

ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಖರೀದಿಯಾಗದೇ ರೈತರನ್ನು ಚಿಂತೆಗೀಡು ಮಾಡಿದೆ. ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವನ್ನು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ‘ಕೊಪ್ಪಳ ಕೇಸರ್’ ಎಂಬ ಬ್ರ್ಯಾಂಡ್ ಮಾವು ರುಚಿ ಮತ್ತು ಬಣ್ಣಕ್ಕೆ ಹೆಸರಾಗಿದೆ.

ಕನಕಗಿರಿ ತಾಲ್ಲೂಕಿನ ಹಿರೇಮಾದಿನಾಳ ಮತ್ತು ಗಂಗಾವತಿ ತಾಲ್ಲೂಕಿನ ವಿಠ್ಠಲಾಪುರ ಗ್ರಾಮದ ಬಳಿಹನುಮಂತ ಹಾಗೂ ಮುತ್ತಣ್ಣ ಭಜಂತ್ರಿ ಸಹೋದರರು ಕಷ್ಟಪಟ್ಟು 13 ಎಕರೆಯಷ್ಟು ಮಾವಿನತೋಟ ಮಾಡಿಕೊಂಡಿದ್ದಾರೆ. ಇದ್ದ ಕೊಳವೆಬಾವಿಯ ಅಲ್ಪ ನೀರಿನಲ್ಲಿಯೇ ಹನಿ ನೀರಾವರಿ ಮೂಲಕ ವಿವಿಧ ತಳಿಯ ಮಾವನ್ನು ಭರ್ಜರಿಯಾಗಿ ಬೆಳೆದಿದ್ದಾರೆ.

ADVERTISEMENT

ಮಾವಿನ ತಳಿಗಳು:ಬೆನೆ ಶಾನ- 500,ಅಲ್ಫಾ ನ್ಸೋ-50,ಕೇಸರ=100,ಪಂಡುರಾ-50,ಮಲ್ಲಿಕಾ-50,ಪೆದ್ದು ರಸಲ್ ಚಿಲ್ಕ ರಸಲ್ -20,ಲೋಕಲ್ ನಾಟಿಯ 190ಮಾವಿನ ಗಿಡಗಳು ಇವೆ. ₹100ರಿಂದ ₹120ಕ್ಕೆ ಒಂದು ಕೆ.ಜಿ ಮಾರಾಟವಾಗುತ್ತಿವೆ.ಒಟ್ಟು ₹9 ಲಕ್ಷಕ್ಕೆ ಈ ತೋಟವನ್ನು ಗುತ್ತಿಗೆಗೆ ಪಡೆದ ಭಜಂತ್ರಿ ಸಹೋದರರು ಸತತ ಪರಿಶ್ರಮದ ಮೂಲಕ ನಿರ್ವಹಣೆ ಮಾಡಿದ್ದಾರೆ. ಆದರೆ ಈ ಬಾರಿ ಲಾಭ ಬರುವುದು ಅಷ್ಟಕ್ಕಷ್ಟೇ ಎಂದು ಹೇಳುತ್ತಾರೆ.

ವನ್ಯಪ್ರಾಣಿಗಳ ಸಮಸ್ಯೆ: ಈ ಭಾಗದಲ್ಲಿ ಕರಡಿ, ಚಿರತೆ, ತೋಳಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಸಂಜೆಯಾದರೆ ಸಂಚರಿಸಲು ಭಯ ಪಡುವ ಪರಿಸ್ಥಿತಿ ಇದೆ. ಕರಡಿ ಹಣ್ಣುಗಳನ್ನು ತಿಂದು ಹಾಕುತ್ತವೆ. ಮಾಂಸಹಾರಿಗಳಾದ ಚಿರತೆ, ತೋಳ ಕೂಡಾ ಕೆಲವು ಸಾರಿ ರುಚಿ ನೋಡುತ್ತವೆ. ಗಿಳಿ ಸೇರಿದಂತೆ ಇತರ ಪಕ್ಷಿಗಳು ಹಣ್ಣನ್ನು ತಿಂದು ಹೋಗುತ್ತಿವೆ. ಆದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಈ ಕುರಿತು ಹನಮಂತ ಭಜಂತ್ರಿ ಮಾತನಾಡಿ, 'ಲಕ್ಷಾಂತರ ಖರ್ಚು ಮಾಡಿ ಕಷ್ಟಪಟ್ಟು ಮಾವು ಬೆಳೆದಿದ್ದೇವೆ. ನಿರ್ವಹಣೆ ಕೂಡಾ ಕಷ್ಟದಾಯಕವಾಗಿದೆ. ಲಾಕ್‌ಡೌನ್‌ನಿಂದ ಮಾರಾಟಕ್ಕೆ ಸಮಸ್ಯೆಯಾಗಿದೆ. ನಾವು ಎದೆಗುಂದಿಲ್ಲ. ರೈತರ ಕಷ್ಟ ಹೀಗೆ ಇರುತ್ತದೆ’ ಎಂದು ವಿಷಾದದಿಂದ ಹೇಳುತ್ತಾರೆ. ವಿವಿಧ ತಳಿಯ ಮಾವುಗಳನ್ನು ಬೆಳೆಯಲಾಗಿದೆ. ಖರೀದಿಸಿಕೊಂಡು ಸೇವಿಸಿದ ಜನರು ಉತ್ತಮವಾಗಿವೆ ಎಂದು ಹೇಳುತ್ತಾರೆ. ದೂರದ ಮಾರುಕಟ್ಟೆಗೆ ಕಳುಹಿಸಲು ಆಗುತ್ತಿಲ್ಲ. ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗಿದ್ದರೂ ಸಂಚಾರ ವ್ಯವಸ್ಥೆ, ವಿವಿಧ ರೀತಿಯ ನಿರ್ಬಂಧಗಳಿಂದ ಪಟ್ಟಣಕ್ಕೆ ಹೋಗಲು ರೈತರು ಆತಂಕ ಪಡುವಂತೆ ಆಗಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.