ADVERTISEMENT

ಅವ ಯಾವ ಮಹಾನಾಯಕ: ಸಚಿವ ಸುನೀಲ್ ಕುಮಾರ್ ಲೇವಡಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 13:48 IST
Last Updated 15 ಏಪ್ರಿಲ್ 2022, 13:48 IST
ಇಂಧನ ಸಚಿವ ವಿ.ಸುನೀಲ್ ಕುಮಾರ್
ಇಂಧನ ಸಚಿವ ವಿ.ಸುನೀಲ್ ಕುಮಾರ್   

ಕೊಪ್ಪಳ: ಸಂತೋಷ್ ಪಾಟೀಲ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಯಾರೆಲ್ಲ ಕುತಂತ್ರ ಮಾಡಿದ್ದಾರೆ ಎಂಬ ಆಯಾಮದಲ್ಲಿ ತನಿಖೆ ಮಾಡಲಾಗುತ್ತದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ಅವರು ಕೊಪ್ಪಳ ತಾಲ್ಲೂಕಿನ ಚಿಲಕಮುಖಿ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದೆ ರಮೇಶ ಜಾರಕಿಹೊಳಿ ಅವರ ರಾಜೀನಾಮೆ ಹಿಂದೆ ಯಾರೆಲ್ಲ ಇದ್ದರು ಎನ್ನುವುದು ನಾಡಿನ ಜನತೆಗೆ ತಿಳಿದಿದೆ. ಅವರಿಗೆ ಮಹಾ ನಾಯಕ ಎನ್ನಬಾರದು. ಅವ ಯಾವ ಮಹಾನಾಯಕ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಮಾರ್ಮಿಕವಾಗಿ ಪ್ರಶ್ನಿಸಿದರು.

ಈಶ್ವರಪ್ಪ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕಾರ್ಯಕಾರಣಿ ಸಭೆಗೂ, ಈಶ್ವರಪ್ಪ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಈಶ್ವರಪ್ಪ ಯಾಕೆ ರಾಜೀನಾಮೆ ನೀಡಿದ್ದಾರೆ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

ADVERTISEMENT

ಸರ್ಕಾರವನ್ನು ವಿಸರ್ಜನೆ ಮಾಡುವಂತೆ ಕಾಂಗ್ರೆಸ್ ಒತ್ತಾಯಿಸುತ್ತದೆ. ಆದರೆ ಕಾಂಗ್ರೆಸ್‌ಗೆ ನೈತಕತೆ ಇಲ್ಲ. ದೇಶದಾದ್ಯಂತ ಕಾಂಗ್ರೆಸ್ ಅನ್ನು ಜನತೆ ಈಗಾಗಲೇ ವಿಸರ್ಜನೆ ಮಾಡಿದ್ದಾರೆ. ಸರ್ಕಾರವನ್ನು ವಿಸರ್ಜನೆ ಮಾಡುವ ಕಾಂಗ್ರೆಸ್ ಹೇಳಿಕೆಗೆ ಅರ್ಥವಿಲ್ಲ. ಸಂತೋಷ ಆತ್ಮಹತ್ಯೆ ಪ್ರಕರಣ ತನಿಖೆ ಹಂತದಲ್ಲಿದೆ. ಈ ವೇಳೆ ರಾಜ್ಯ ಸರ್ಕಾರದ ವಿಸರ್ಜನೆ ಮಾಡುವ ಮಾತು ಯಾಕೆ ಎಂದರು.

ಕಾಂಗ್ರೆಸ್ ನಾಯಕರಿಗೆ ನೇರವಾಗಿ ಬಿಜೆಪಿಯನ್ನು ಎದುರಿಸುವುದಕ್ಕೆ ಆಗುತ್ತಿಲ್ಲ. ಈ ರೀತಿಯಾಗಿ ಪರೋಕ್ಷವಾಗಿ ಹುನ್ನಾರ ನಡೆಸುತ್ತಿದ್ದಾರೆ. ಈ ಹುನ್ನಾರವನ್ನು ಜನ ಅರ್ಥಮಾಡಿಕೊಳ್ಳುತ್ತಾರೆ. ಈ ಹುನ್ನಾರಗಳನ್ನು ಬಿಜೆಪಿ ಎದುರಿಸುತ್ತದೆ. ಮುಂದಿನ ದಿನಗಳಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು

ಈಶ್ವರಪ್ಪನವರ ಪ್ರಕರಣದಲ್ಲಿ ವಿಜೇಯಂದ್ರ ಅವರ ಕೈವಾಡವಿದೆ ಎನ್ನುವ ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.