ಕುಷ್ಟಗಿ: ‘ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಯೂರಿಯಾ ರಾಸಾಯನಿಕ ಗೊಬ್ಬರದ ಬಿಕ್ಕಟ್ಟು ಸೃಷ್ಟಿಯಾಗಿದ್ದು ಇಂಥ ಸೂಕ್ಷ್ಮ ಸಂದರ್ಭದಲ್ಲಿ ಮಾರಾಟಗಾರರು ಸರ್ಕಾರದ ನಿಯಮದಂತೆ ನಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಗೊಬ್ಬರ ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬುಧವಾರ ಇಲ್ಲಿ ನಡೆದ ಗೊಬ್ಬರ ವಿತರಕರು, ಕೃಷಿ, ತೋಟಗಾರಿಕೆ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಮಾಲಚನೆ ಸಭೆ ನಡೆಸಿದ ಅವರು, ಯಾವುದೇ ಗೊಬ್ಬರಗಳನ್ನು ಕನಿಷ್ಟ ಚಿಲ್ಲರೆ ದರ (ಎಂಆರ್ಪಿ)ದಲ್ಲಿಯೇ ಮಾರಾಟ ಮಾಡಬೇಕು ಎಂದು ತಾಕೀತು ಮಾಡಿದರಲ್ಲದೆ ನಿಯಮ ಮೀರಿ ವರ್ತಿಸಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಪರೋಕ್ಷ ಎಚ್ಚರಿಕೆಯನ್ನೂ ನೀಡಿದರು.
ಈ ಸಂದರ್ಭದಲ್ಲಿ ಗೊಬ್ಬರ ದಾಸ್ತಾನು, ದರ ನಿಗದಿ, ಮಾರಾಟ ವ್ಯವಸ್ಥೆ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಗೊಬ್ಬರ ವಿತರಣೆ ವಿಷಯದಲ್ಲಿ ತಮಗೆ ಆಗುತ್ತಿರುವ ಸಮಸ್ಯೆಯನ್ನು ವಿತರಕರು ಸಭೆಯ ಗಮನಕ್ಕೆ ತಂದರು ಎಂದು ತಿಳಿಸಲಾಗಿದೆ.
ಸಹಾಯಕ ಕೃಷಿ ನಿರ್ದೇಶಕ ನಾಗರಾಜ ಕಾತರಕಿ ಸೇರಿದಂತೆ ಇತರೆ ಅಧಿಕಾರಿಗಳು, ಗೊಬ್ಬರ ವಿತರಕರ ಮಾರಾಟಗಾರರ ಸಂಘದ ಪ್ರತಿನಿಧಿಗಳು ಸಭೆಯಲ್ಲಿದ್ದರು.
ನಂತರ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಯೂರಿಯಾ ಗೊಬ್ಬರ ವಿತರಣೆ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಮತ್ತು ಕೃಷಿ ಅಧಿಕಾರಿಗಳು ಮಾರಾಟಗಾರರಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು. ಅಲ್ಲದೆ ಯೂರಿಯಾ ಸಮಸ್ಯೆ ಕುರಿತು ರೈತರು ಅಧಿಕಾರಿಗಳ ಗಮನಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.