ಗಂಗಾವತಿ (ಕೊಪ್ಪಳ ಜಿಲ್ಲೆ): ‘ಜನರ ಸೇವೆ ಮಾಡುವ ಸಲುವಾಗಿ ಬಿಜೆಪಿಗೆ ಸೇರಿದ್ದೇನೆ. ಮುಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದ ಸ್ಪರ್ಧಿಸುತ್ತೇನೆ. ನನ್ನ ರಾಜಕೀಯ ನಿವೃತ್ತಿ ಕೂಡ ಬಿಜೆಪಿಯಿಂದಲೇ ಆಗುತ್ತದೆ ಹೊರತು; ಬೇರೆ ಯಾವ ಪಕ್ಷಗಳಿಗೂ ಹೋಗುವುದಿಲ್ಲ’ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಸೋಮವಾರ ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ‘ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ಕಾರ್ಯಕರ್ತರು ಬೇಸರಗೊಂಡಿದ್ದರು. ಇದರಿಂದ ನನಗೆ ಹಿಂದಿನ ಚುನಾವಣೆಯಲ್ಲಿ ಸೋಲಾಗಿರಬಹುದು. ಈಗ ಬಿಜೆಪಿಯೇ ನನಗೆ ಮಾತೃಪಕ್ಷ. ಒಂದೊಂದು ಚುನಾವಣೆಗೆ ಒಂದೊಂದು ಪಕ್ಷ ಆಯ್ಕೆ ಮಾಡಿಕೊಳ್ಳುವ ಜಾಯಾಮಾನ ನನ್ನದಲ್ಲ. ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಅಧಿಕಾರ, ಸ್ಥಾನಮಾನ ಹಾಗೂ ಅಂತಸ್ತು ಅನುಭವಿಸಿದ್ದೇನೆ. ಮುಂದೆಯೂ ಜನಸೇವೆ ಮಾಡುವುದಷ್ಟೇ ನನ್ನ ಕೆಲಸ’ ಎಂದರು.
‘ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಕಾನೂನಿನ ಮಿತಿ ನೋಡಿಕೊಂಡು ಮೀಸಲಾತಿ ನೀಡಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಪ್ರತಿಪಾದಿಸಲು ಎಲ್ಲ ಸಮುದಾಯದವರಿಗೂ ಅಧಿಕಾರವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.