ಗಂಗಾವತಿ: ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳು ಖಾತಾ ವರ್ಗಾವಣೆ ಮಾಡಿಕೊಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ ಅವರು ಕಚೇರಿಗೆ ಬೀಗ ಜಡಿದು ಒಂದು ಗಂಟೆಗೂ ಹೆಚ್ಚುಕಾಲ ಅಧಿಕಾರಿಗಳನ್ನು ಕೂಡಿ ಹಾಕಿದರು.
‘ನಗರದ ಹಿರೇಜಂತಕಲ್ ಕಾಲೊನಿಯ ನಿವೇಶನದ ಖಾತಾ ವರ್ಗಾವಣೆ ಕೋರಿ ವರ್ಷದ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇದುವರೆಗೂ ಯಾವುದೇ ಪ್ರಕ್ರಿಯೆ ಮಾಡಿಲ್ಲ. ಪ್ರತಿದಿನ ಕಚೇರಿಗೆ ಭೇಟಿ ನೀಡುತ್ತಿದ್ದೇನೆ. ಸಬೂಬು ಹೇಳುತ್ತಿದ್ದಾರೆ. ಸೋಮವಾರವೂ ಖಾತಾ ವರ್ಗಾವಣೆ ಕುರಿತು ವಿಚಾರಿಸಿದರೆ ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿದೆ. ನಂತರ ಸ್ಥಳೀಯರ ಮನವಿ ಮೇರೆಗೆ ಬೀಗ ತೆಗೆದೆ’ ಎಂದುಹುಸೇನಪ್ಪ ಹಂಚಿನಾಳ ಹೇಳಿದರು.
ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಪ್ರತಿಕ್ರಿಯಿಸಿ, ‘ನನ್ನ ಗಮನಕ್ಕೆ ತರದೇ ಏಕಾಏಕಿ ಹೋಗಿ ಕಚೇರಿಗೆ ಬೀಗ ಹಾಕಿದ್ದು ತಪ್ಪು. ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಅವರ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.