ಮುನಿರಾಬಾದ್: ತುಂಗಭದ್ರಾ ಯೋಜನೆ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರೊಬ್ಬರ ಶವ ಮಂಗಳವಾರ ಬೆಳಿಗ್ಗೆ ಇಲ್ಲಿನ ಉಪಕಾಲುವೆಯಲ್ಲಿ ಪತ್ತೆಯಾಗಿದೆ.
ಮೃತರನ್ನು ಅಗಳಕೇರಾ ಗ್ರಾಮದ ಲಿಂಗರಾಜ ಮೈಲಾರಪ್ಪ ಮಡಿವಾಳರ (44) ಎಂದು ಗುರುತಿಸಲಾಗಿದೆ. ನೀರಾವರಿ ಕಾಲುವೆ ನಿರ್ವಹಣೆಯಲ್ಲಿ ಗ್ಯಾಂಗ್ಮನ್ ಆಗಿ ಅವರು ಸುಮಾರು 22 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಎಂದು ಹೋದವರು ಮಂಗಳವಾರ ಬೆಳಿಗ್ಗೆ ಅವರ ಶವ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಲಿಂಗರಾಜ ಕುಟುಂಬದ ಸದಸ್ಯರು ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಿದರು.
ನೀರಾವರಿ ಕಚೇರಿ ಮುಂದೆ ಶವ: ನೀರಾವರಿ ನಿಗಮ ವ್ಯಾಪ್ತಿಯ ಅಗಳಕೇರಾ ಗ್ರಾಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯ ಎದುರು ಕೆಲಕಾಲ ಶವ ಇಟ್ಟ ಮೃತರ ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಹೆಚ್ಚಿನ ಪರಿಹಾರಕ್ಕಾಗಿ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ನೀರಾವರಿ ಇಲಾಖೆಯ ಎಂಜಿನಿಯರ್ ನಾಗಭೂಷಣ, ಅಜೀಜ್ ಮತ್ತು ಅಮರೇಶಪ್ಪ ಅವರು ಅಂತ್ಯಸಂಸ್ಕಾರದ ಖರ್ಚಿಗೆಂದು ₹10 ಸಾವಿರ ನೀಡಿದರು ಎಂದು ಕುಟುಂಬದವರು ತಿಳಿಸಿದ್ದಾರೆ. ಇಲ್ಲಿನ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.