ADVERTISEMENT

ಕುಷ್ಟಗಿ: ನರೇಗಾ ಜಾಬ್‌ಕಾರ್ಡ್ ದುರ್ಬಳಕೆ ಸಲ್ಲ

ಕೂಲಿ ಕಾರ್ಮಿಕರಿಗೆ ಸಹಾಯಕ ನಿರ್ದೇಶಕ ವಿಶ್ವನಾಥ ರಾಠೋಡ್ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 12:27 IST
Last Updated 6 ಜನವರಿ 2022, 12:27 IST
ಕುಷ್ಟಗಿ ತಾಲ್ಲೂಕು ತಳುವಗೇರಾದಲ್ಲಿ ನಡೆದ ನರೇಗಾ ರೋಜಗಾರ ದಿನಾಚರಣೆಯಲ್ಲಿ ಕೂಲಿಕಾರರು ಪಾಲ್ಗೊಂಡಿದ್ದರು
ಕುಷ್ಟಗಿ ತಾಲ್ಲೂಕು ತಳುವಗೇರಾದಲ್ಲಿ ನಡೆದ ನರೇಗಾ ರೋಜಗಾರ ದಿನಾಚರಣೆಯಲ್ಲಿ ಕೂಲಿಕಾರರು ಪಾಲ್ಗೊಂಡಿದ್ದರು   

ಕುಷ್ಟಗಿ: ನರೇಗಾ ಯೋಜನೆಯಲ್ಲಿ ಪಡೆಯಲಾಗಿರುವ ಉದ್ಯೋಗ ಚೀಟಿ (ಜಾಬ್‌ಕಾರ್ಡ್) ಸ್ವಂತ ಆಸ್ತಿ ಇದ್ದಂತೆ, ಹಾಗಾಗಿ ಅದನ್ನು ಬೇರೆಯವರ ಕೈಗೆ ಕೊಡಬಾರದು ಎಂದು ಇಲ್ಲಿಯ ತಾಲ್ಲೂಕು ಪಂಚಾಯಿತಿಯಲ್ಲಿನ ನರೇಗಾ ಯೋಜನೆ ಸಹಾಯಕ ನಿರ್ದೇಶಕ ವಿಶ್ವನಾಥ ರಾಠೋಡ ಹೇಳಿದರು.

ತಾಲ್ಲೂಕಿನ ತಳುವಗೇರಾ ಗ್ರಾಮದಲ್ಲಿ ನಾಲೆಯ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಏರ್ಪಡಿಸಿದ್ದ ನರೇಗಾ ರೋಜಗಾರ ದಿನ ಆಚರಣೆ ಕುರಿತು ಮಾತನಾಡಿದರು.

ಜನೆಯಡಿ ದನದ ಶಡ್, ಕೋಳಿ ಶೆಡ್, ಕುರಿ ಶಡ್, ಕೃಷಿ ಹೊಂಡ, ಬದು ನಿರ್ಮಾಣ, ಎರೆಹುಳು ಘಟಕ, ಇಂಗು ಗುಂಡಿ, ಸಸಿ ನಾಟಿ, ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಅನುಕೂಲ ಒದಗಿಸಲಾಗುತ್ತದೆ. ರೈತರು, ಕೃಷಿಕೂಲಿಕಾರರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ADVERTISEMENT

ಅಲ್ಲದೆ ಕೆಲ ವ್ಯಕ್ತಿಗಳು ಜಾಬ್‌ಕಾರ್ಡ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅದರಿಂದ ಉದ್ಯೋಗ ಚೀಟಿ ಹೊಂದಿದ ಮೂಲ ವ್ಯಕ್ತಿಗಳು ಯೋಜನೆಯ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದರು.

ಕೂಲಿ ಕೆಲಸ ಬೇಕಾದವರು ನಮೂನೆ-6 ಅಥವಾ ಬಿಳಿಯ ಹಾಳೆಯ ಮೇಲೆ ಗ್ರಾಮ ಪಂಚಾಯಿತಿಗಳಿಗೆ ಬೇಡಿಕೆ ಸಲ್ಲಿಸಿದರೆ ಎರಡು ವಾರದಲ್ಲಿ ಕೆಲಸ ಕೊಡುತ್ತಾರೆ. ಜಮೀನು ಹೊಂದಿರುವ ರೈತರು ಒಂದು ಜಾಬ್ ಕಾರ್ಡ್‌ ಮೇಲೆ ₹ 2.50 ಲಕ್ಷ ವರೆಗೆ ವೈಯಕ್ತಿಕ ಕಾಮಗಾರಿ ಹಾಗೂ ಜಮೀನು ಇಲ್ಲದ ಕೃಷಿ ಕೂಲಿ ಕಾರ್ಮಿಕರು ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ಮಾಡಿ ₹ 29,900 ಕೂಲಿ ಹಣ ಸಂಪಾದನೆ ಮಾಡಲು ಅವಕಾಶ ಇದೆ ಎಂದು ವಿವರಿಸಿದರು.

ನರೇಗಾ ಯೋಜನೆಯಲ್ಲಿನ ಸೌಲಭ್ಯ ಪಡೆಯಬೇಕಾದರೆ ಜಾಬ್ ಕಾರ್ಡ್‌ ಕಡ್ಡಾಯವಾಗಿ ಇರಬೇಕಾಗುತ್ತದೆ. ಅದನ್ನು ಪಡೆಯಲು ಆಧಾರ್ ಕಾಡ್‌, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಒಂದು ಫೋಟೋ ನೀಡಬೇಕು. 18 ವರ್ಷ ಮೇಲ್ಪಟ್ಟ ಎಲ್ಲ ಸದಸ್ಯರ ದಾಖಲಾತಿಗಳನ್ನು ಗ್ರಾಮ ಪಂಚಾಯತಿಯ ಡಿಇಒಗೆ ಸಲ್ಲಿಸಿದರೆ ಹೊಸ ಜಾಬ್ ಕಾರ್ಡ್‌ ನೀಡುತ್ತಾರೆ ಎಂದು ಹೇಳಿದರು.

ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಇದೆ. ಅಂಗವಿಕಲರು, ಮೂಗರು, ಕಿವುಡರಿಗೆ ಹಾಗೂ ಹಿರಿಯ ನಾಗರಿಕರಿಗೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಕೊಡುವುದಕ್ಕೆ ಅವಕಾಶವಿದೆ. ನರೇಗಾ ಯೋಜನೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆ ಇದ್ದರೆ ಉಚಿತ ಸಹಾಯವಾಣಿ ಸಂಖ್ಯೆ- 18004258666 ಗೆ ಕರೆ ಮಾಡಬಹದು ಎಂದರು.

ನರೇಗಾ ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ತಾಂತ್ರಿಕ ಸಂಯೋಜಕ ತನ್ವಿರ್ ಶೇಟ್‌, ಅಭಿವೃದ್ಧಿ ಅಧಿಕಾರಿ ಬಸವರಾಜ, ಮಲ್ಲಿಕಾರ್ಜುನ ಇತರರು ಇದ್ದರು. ಗ್ರಾಮದ ಬಹಳಷ್ಟು ಕೂಲಿಕಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.