ADVERTISEMENT

ಕೊಪ್ಪಳ: ಪಡಿತರಕ್ಕೆ ನಿಲ್ಲದ ಪರದಾಟ: ಬಾರದ ಹೊಸ ಚೀಟಿ

ಅಕ್ಕಿ, ಗೋಧಿಗೆ ಬರವಿಲ್ಲ: ತೊಗರಿ ಬೇಳೆ, ಅಡುಗೆ ಎಣ್ಣೆ ಕೊಟ್ಟಿಲ್ಲ

ಸಿದ್ದನಗೌಡ ಪಾಟೀಲ
Published 27 ಸೆಪ್ಟೆಂಬರ್ 2020, 19:31 IST
Last Updated 27 ಸೆಪ್ಟೆಂಬರ್ 2020, 19:31 IST
ಕೊಪ್ಪಳದ ಗವಿಮಠ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯೊಂದರ ಎದುರು ಪಡಿತರ ಪಡೆಯಲು ನಿಂತಿರುವ ಪಡಿತರ ಚೀಟಿದಾರರು
ಕೊಪ್ಪಳದ ಗವಿಮಠ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯೊಂದರ ಎದುರು ಪಡಿತರ ಪಡೆಯಲು ನಿಂತಿರುವ ಪಡಿತರ ಚೀಟಿದಾರರು   

ಕೊಪ್ಪಳ: ಲಾಕ್‌ಡೌನ್‌ ಮತ್ತು ನಂತರದ ದಿನಗಳಲ್ಲಿ ಪಡಿತರಕ್ಕಾಗಿಜನರು ಪರದಾಡುವಂತೆ ಆಗಿದೆ. 10 ಸಾವಿರ ಜನ ಅರ್ಹರಿದ್ದರೂ ತಾಂತ್ರಿಕ ತೊಂದರೆಯಿಂದ ಪಡಿತರ ದೊರೆಯದೇ ಸಂಕಷ್ಟವನ್ನು ಅನುಭವಿಸುವಂತೆ ಆಗಿದೆ.

ಪಡಿತರ ದೊರೆಯದೆ ತೊಂದರೆಗೆ ಒಳಗಾದ ಕುಟುಂಬಗಳಿಗೆ ಕೆಲ ದಾನಿಗಳುದಿನಸಿ ಸಾಮಗ್ರಿವಿತರಿಸಿರೆ, ಯಾರಿಗೆ ಕಿಟ್‌ ನೀಡಬೇಕು ಎಂಬ ಗೊಂದಲದಲ್ಲಿಯೇ ಆಹಾರ ಇಲಾಖೆಯು ಎರಡು, ಮೂರು ತಿಂಗಳನ್ನು ಕಳೆದುಬಿಟ್ಟಿತು. ಪಡಿತರ ಚೀಟಿ ಮಾಡಿಸಿಕೊಳ್ಳುವಲ್ಲಿ ಗೊಂದಲ ಹಾಗೆ ಮುಂದುವರಿದಿದೆ. ಇದರಿಂದ ಜನರಿಗೆ ಮತ್ತಷ್ಟು ತೊಂದರೆಯಾಗಿದ್ದು, ಸುಳ್ಳಲ್ಲ.

ಜಿಲ್ಲೆಯಲ್ಲಿ ಇರುವ446 ನ್ಯಾಯಬೆಲೆ ಅಂಗಡಿಗಳ ಮೂಲಕ 3,45,092 ಪೈಕಿ 2,65,586 ಚೀಟಿದಾರರು ಪಡಿತರ ಪಡೆದಿದ್ದಾರೆ. ಶೇ 77.14ರಷ್ಟು ಜನರಿಗೆ ಪಡಿತರ ಸಿಕ್ಕಿದೆ. ಗಂಗಾವತಿಯಲ್ಲಿ ಹೆಚ್ಚು ಪಡಿತರ ಚೀಟಿದಾರರು (1,20,862) ಇದ್ದರೆ, ಯಲಬುರ್ಗಾ ತಾಲ್ಲೂಕಿನಲ್ಲಿ ಕಡಿಮೆ (64,848) ಇದ್ದಾರೆ.

ADVERTISEMENT

ಸರ್ಕಾರಿ ಉದ್ಯೋಗ ಸೇರಿದಂತೆ ಇತರೆ ಅನರ್ಹರು ಕೂಡಾ ಪಡಿತರ ಚೀಟಿ ಮಾಡಿಸಿಕೊಂಡಿದ್ದರು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಪದೇ ಪದೇ ಪ್ರಕಟಣೆ ಹೊರಡಿಸಿದ ನಂತರ 1113 ಜನರು ಚೀಟಿಯನ್ನು ಮರಳಿ ಇಲಾಖೆಗೆ ಒಪ್ಪಿಸಿದ್ದಾರೆ.

ಅಕ್ಕಿ, ಗೋಧಿಗೆ ಬರವಿಲ್ಲ: ಮಾರ್ಚ್‌ 22ರ ನಂತರ ಲಾಕ್‌ಡೌನ್‌ ಆದ ಅವಧಿಯಲ್ಲಿ ನಂತರ ಎರಡು ತಿಂಗಳು ಬಿಟ್ಟು ಅಕ್ಕಿ, ಗೋಧಿ, ತೊಗರಿ ಬೇಳೆ, ಚಹಾಪುಡಿ, ಸಕ್ಕರೆಯನ್ನು ನೀಡಿದ್ದಾರೆ. ಆದರೆ, ನಂತರದ ಅವಧಿಯಲ್ಲಿ ಅಕ್ಕಿ, ಗೋಧಿ ಮಾತ್ರ ನೀಡಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಕೇಂದ್ರ ಸರ್ಕಾರದ ಸಮರ್ಪಕವಾಗಿ ಪಡಿತರ ವಿತರಿಸುವಂತೆ ಜನರು ಒತ್ತಾಯಿಸಿದ್ದಾರೆ. ಹೋರಾಟಗಳೂ ನಡೆದಿವೆ. ಆದರೆ, ಹೆಚ್ಚಿನ ಪ್ರಯೋಜನಗಳಾಗಿಲ್ಲ.

ಅಲ್ಲದೇ, 250 ಅಲೆಮಾರಿ ಕುಟುಂಬಗಳಿಗೆ ಪಡಿತರ ಚೀಟಿಯೇ ಇದ್ದಿಲ್ಲ. ಪಡಿತರವೂ ಇಲ್ಲದೆ, ಅಂಗಡಿಗಳು ಇಲ್ಲದೆ ತೀವ್ರ ಪರದಾಡಿದ್ದರು. ಇವರಿಗೆ ಕೆಲ ಸಾಮಾಜಿಕ ಹೋರಾಟಗಾರರು ಪ್ರತಿದಿನ ಊಟ, ದಿನಸಿ ನೀಡಿದ್ದಾರೆ. ಇದನ್ನು ಕಂಡು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರತಿ ವ್ಯಕ್ತಿಗೆ 25 ಕೆ.ಜಿಯಂತೆ ಅಕ್ಕಿಯನ್ನು ನೀಡಿತ್ತು.

ಆದರೆ ಪಡಿತರದಾರರ ಬೇಡಿಕೆಯಂತೆ ಅಕ್ಕಿ, ಗೋಧಿ ಜೊತೆಗೆ ಸಕ್ಕರೆ, ಬೆಲ್ಲ, ಚಹಾಪುಡಿ, ತೊಗರಿ ಬೇಳೆಯನ್ನು ಕಡಿಮೆ ದರಕ್ಕೆ ನೀಡಬೇಕು ಎಂಬ ಬೇಡಿಕೆಗೆ ಇಲಾಖೆ ಸ್ಪಂದಿಸಿಲ್ಲ. ಕೆಲವು ಕಡೆ ಸಂಗ್ರಹ ಇದ್ದರೂ ಹೆಚ್ಚಿನ ಹಣ ನೀಡಿ ಪಡಿತದಾರರು ಖರೀದಿಸಿದ್ದಾರೆ.

ಕಾಳಸಂತೆಯೇ ಕಂಟಕ: ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಿದ ದೊಡ್ಡ ಜಾಲವನ್ನೇ ಬೇಧಿಸಲಾಗಿದೆ. ₹30 ಲಕ್ಷ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಬಡವರಿಗೆ ನೀಡುವ ಅಕ್ಕಿಯನ್ನು ಅವರಿಗೆ ನೀಡದೇ 'ಸ್ಟಾಕ್‌ ಇಲ್ಲ ಮುಂದಿನ ತಿಂಗಳು ನೀಡುತ್ತೇವೆ' ಎಂಬ ಸಬೂಬು ಹೇಳಿ ಖಾಸಗಿಯವರಿಗೆ ಮಾರಾಟ ಮಾಡಿಕೊಂಡ ಪ್ರಕರಣ ಕೂಡಾ ಇದೆ.

ಅಲ್ಲದೆ ಪಡಿತರ ಅಕ್ಕಿಯನ್ನು ಫಾಲಿಶ್‌ ಮಾಡಿ ಬ್ರ್ಯಾಂಡ್‌ ಹೆಸರಿನಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುವ ದಂಧೆಯೂ ಗಂಗಾವತಿಯಲ್ಲಿ ಇದೆ. ಈ ಕುರಿತು ಕೂಡಾ ಆಹಾರ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಬಡವರ ಅಕ್ಕಿಯ ಮೇಲೆ ಕಣ್ಣಿದ್ದು, ನ್ಯಾಯಬೆಲೆ ಅಂಗಡಿ ತೆರೆಯಲು ಪರವಾನಗಿಗೆ ಭಾರಿ ಬೆಲೆ ಇದೆ.

ಪಡಿತರಕ್ಕೂ ತಾಂತ್ರಿಕ ಸಮಸ್ಯೆ: ಬಡವರು ಪಡಿತರ ಮತ್ತು ಪಡಿತರ ಚೀಟಿ ಪಡೆಯಲು ನೂರೆಂಟು ವಿಘ್ನ ಎದುರಾಗಿದೆ. ಲಾಕ್‌ಡೌನ್‌ ನಂತರ ಹೊಸ ಪಡಿತರ ಚೀಟಿಯನ್ನು ಇಲ್ಲಿಯವರೆಗೆ ನೀಡಿಲ್ಲ. ಲಾಕ್‌ಡೌನ್‌ ಬಂದ್‌, ತಾಂತ್ರಿಕ ಸಮಸ್ಯೆ ಮುಂತಾದ ಕಾರಣಗಳಿಂದ ಹೊಸ ಪಡಿತರ ಚೀಟಿ ಇನ್ನೂ ಬಂದಿಲ್ಲ.

ಪಡಿತರ ಪಡೆಯಲು ಕೆಲವು ಗ್ರಾಮಗಳಲ್ಲಿ ನಿತ್ಯ ಅಲೆಯಬೇಕಾಗಿದೆ. ವಿದ್ಯುತ್, ಇಂಟರ್‌ನೆಟ್ ಸಮಸ್ಯೆಯಿಂದ ಬೆರಳು ಗುರುತು ನೀಡಲು ಆಗುತ್ತಿಲ್ಲ. ಅಲ್ಲದೆ ಕೆಲವು ಕಡೆ ಸಾಫ್ಟ್‌ವೇರ್‌ ಹಾಳಾಗಿದ್ದು, ಬೆರಳು ಗುರುತು ನೀಡಿದರೂ ಚೀಟಿದಾರರನ್ನು ಖಚಿತಪಡಿಸದ ಪರಿಣಾಮ ಪಡಿತರ ದೊರೆಯುತ್ತಿಲ್ಲ. ಇದರಿಂದ ಬಡವರು, ಕೂಲಿಕಾರರಿಗೆ ಮತ್ತಷ್ಟು ಸಮಸ್ಯೆಯಾಗಿದೆ.

‘ಪಡಿತರ ಆಹಾರಧಾನ್ಯವನ್ನು ಪಡಿತರ ಚೀಟಿದಾರರು ಸದುಪಯೋಗ ಪಡಿಸಿಕೊಳ್ಳಬೇಕು. ಅಕ್ರಮ ಮಾರಾಟ ಮಾಡುವವರ ಮತ್ತು ಅದನ್ನು ಖರೀದಿಸುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಡಿತರ ಚೀಟಿಗೆ ಅರ್ಜಿ ಹಾಕಿದ ಬಡವರಿಗೆ ಮೊದಲ ಆದ್ಯತೆ ನೀಡುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಚಿಸಲಾಗಿದೆ’ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತನಗೌಡ ಗುಣಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.