ಗಂಗಾವತಿ: ಪದವಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸೆಮಿಸ್ಟರ್ ಪರೀಕ್ಷೆಯೊಂದಿಗೆ ಕಳೆದ ಸೆಮಿಸ್ಟರ್ನ ಪರೀಕ್ಷೆ ನಡೆಸುತ್ತೇವೆ ಎಂಬ ನಿರ್ಧಾರವು ಅವೈಜ್ಞಾನಿಕವಾಗಿದೆ. ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಎಐಡಿಎಸ್ಒ ಸಂಘಟನೆಯ ಕಾರ್ಯಕರ್ತರು ನಗರದ ಶ್ರೀ ಕೃಷ್ಣದೇವರಾಯ ಸರ್ಕಲ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಮುಖಂಡ ಗಂಗರಾಜ ಅಳ್ಳಳ್ಳಿ ಮಾತನಾಡಿ, ಕಳೆದ ಬಾರಿ ಕೋವಿಡ್ ವೇಳೆಯಲ್ಲಿ ಪದವಿ ಪರೀಕ್ಷೆಗಳನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಉತ್ತೀರ್ಣರನ್ನಾಗಿ ಮಾಡಿತ್ತು. ಆದರೆ ಸದ್ಯ ಪ್ರಸಕ್ತ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸುವ ವೇಳೆಯಲ್ಲಿ ಕಳೆದ ಬಾರಿಯ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸುವ ನಿರ್ಧಾರ ಮಾಡಲಾಗಿದೆ. ಒಂದೇ ತಿಂಗಳಿನಲ್ಲಿ ವಿದ್ಯಾರ್ಥಿಗಳು ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ.
ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ, ಪ್ರಜಾಸತ್ತಾತ್ಮಕ ಚರ್ಚೆಯ ನಂತರವೇ ಮಾಡಬೇಕು. ಪ್ರಸಕ್ತ ಸಾಲಿನ ಸೆಮಿಸ್ಟರ್ ಪರೀಕ್ಷೆಯನ್ನು ಮಾತ್ರ ಅಚ್ಚುಕಟ್ಟಾಗಿ ನಡೆಸಬೇಕು ಆಫ್ಲೈನ್ ತರಗತಿಗಳು ಆರಂಭವಾಗುವ ಮುನ್ನ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಮುಖರಾದ ಆನಂದ, ರಾಘವೇಂದ್ರ, ನಾಗರಾಜ, ದೇವರಾಜ, ಸುನೀಲ್, ಫಯಾಜ್, ಚನ್ನಬಸವ ಹಾಗೂ ಇತರರು ಈ ವೇಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.