ಕನಕಗಿರಿ: ಮೇಲ್ವರ್ಗದ ಅನ್ಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿ ಸಮಾಜದವರು ಗುರುವಾರ ಪ್ರತಿಭಟನೆ ನಡೆಸಿದರು.
ಕಲ್ಮಠದಿಂದ ಆರಂಭವಾದ ಪ್ರತಿಭಟನೆ ರಾಜಬೀದಿ ಮೂಲಕ ವಾಲ್ಮೀಕಿ ವೃತ್ತದ ವರೆಗೂ ನಡೆಯಿತು.
ಈ ಸಮಯದಲ್ಲಿ ಪ್ರಮುಖರು ಮಾತನಾಡಿ, ಮೇಲ್ವರ್ಗಕ್ಕೆ ಸೇರಿದ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಶಿಫಾರಸು ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
‘ತಳವಾರ, ಪರಿವಾರರ ಹೆಸರಿನಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದರೂ ಸರ್ಕಾರ ಅದನ್ನು ತಡೆಯುವಲ್ಲಿ ವಿಫಲವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಚ ನಾಗರಾಜ ಇದ್ಲಾಪುರ, ಪ್ರಮುಖರಾದ ರಮೇಶ ನಾಯಕ, ನಿಂಗಪ್ಪ ನಾಯಕ ಇತರರು ಮಾತನಾಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ವಾಲ್ಮೀಕಿ ನಾಯಕ ಸಮಾಜದ ನಗರ ಘಟಕದ ಅಧ್ಯಕ್ಷ ನರಸಪ್ಪ ನಾಯಕ, ಪ್ರಮುಖರಾದ ಗುರುನಗೌಡ, ಗ್ಯಾನಪ್ಪ, ರಾಮು ಆಗೋಲಿ, ಬಾರಿಮರದಪ್ಪ ನಡುಲಮನಿ, ಶರತ್ ನಾಯಕ, ನಾಗರಾಜ ಇದ್ಲಾಪುರ, ಪಂಪಾಪತಿ ಸೋಮಸಾಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.