ಪ್ರಜಾವಾಣಿ ವಾರ್ತೆ
ಗಂಗಾವತಿ: ‘ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಪಡಿತರ ಅಕ್ಕಿ ಅಕ್ರಮ ಸಾಗಾಟದ ದಂಧೆ ಜೋರಾಗಿ ನಡೆಯುತ್ತಿದ್ದು, ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯದ ಕಾರ್ಯವೈಖರಿಯೇ ಕಾರಣ. ಕಾಯಕದ ಮೇಲೆ ನಿಗಾವಹಿಸಿದರೆ ಬಡವರಿಗೆ ಸೇರಬೇಕಾದ ಅಕ್ಕಿ ದಂಧೆಕೋರರ ಪಾಲಾಗಲ್ಲ’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ ಬಾಬು ಹೇಳಿದರು.
ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಸೋಮವಾರ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಆಹಾರ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ಬಡವರಿಗೆ, ಶಾಲಾ ಮಕ್ಕಳಿಗೆ ತಲುಪಸಿಬೇಕಾದ ಅನ್ನಭಾಗ್ಯ ಯೋಜನೆ ಅಕ್ಕಿ ತಲುಪಿಸಿದರೆ ಯಾವ ಅಕ್ರಮವೂ ನಡೆಯಲ್ಲ. ಇಲ್ಲಿನ ಆಹಾರ ಶಿರಸ್ತೇದಾರರು, ನಿರೀಕ್ಷಕರು ಏನು ಕೆಲಸ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಅಕ್ಕಿ ಆಕ್ರಮ ಸಾಗಾಟ ದಂಧೆ ನಡೆಯುತ್ತಲೇ ಇದೆ. ಸ್ವಯಂ ಪ್ರೇರಣೆಯಿಂದ ದಾಳಿ ನಡೆಸಿ, ಪ್ರಕರಣ ದಾಖಲು ಮಾಡಲು ಮುಂದಾಗುತ್ತಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಕೂಡಲೇ ಅಧಿಕಾರಿಗಳು ಎಚ್ಚೆತ್ತು ಪಡಿತರ ಅಕ್ಕಿ ಸಾಗಾಟ ದಂಧೆ ಕಡಿವಾಣಕ್ಕೆ ಮುಂದಾಗಬೇಕು. ಹಾಗೆಯೇ ಸಾರಿಗೆ ಇಲಾಖೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು
ನಂತರ ವಿವಿಧ ಇಲಾಖೆ ಅಧಿಕಾರಿಗಳಿಂದ ಪ್ರಗತಿ ವರದಿ ಪಡೆದು, ಪರಿಶೀಲಿಸಿ, ಅವುಗಳ ಬಗ್ಗೆ ಚರ್ಚೆ ನಡೆಸಿ, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ತಾ.ಪಂ ಇಒ ರಾಮರೆಡ್ಡಿ ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಆನಂದ, ದಾವಲ್, ಮುಷ್ತಾಕ್, ಹಮೀದ್ ಮುಲ್ಲಾ, ಅಹಮ್ಮದ್ ಪಟೇಲ್, ರಾಜಪ್ಪ, ಮಂಜುನಾಥ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.