ಕಾರಟಗಿ: ಗಂಗಾವತಿ ತಾಲ್ಲೂಕಿನ ವಿಠಲಾಪುರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವತಿ ಮರಿಯಮ್ಮಳ ಮೇಲೆ ದೌರ್ಜನ್ಯವೆಸಗಿ, ವಿಷ ಕುಡಿಸಿ ಹತ್ಯೆ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಪ್ರಕರಣದ ಇತರ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬಳ್ಳಾರಿ ಐಜಿಪಿಗೆ ಬರೆದ ಮನವಿಯನ್ನು ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ನೇತೃತ್ವದಲ್ಲಿ ಇಲ್ಲಿಯ ಇನ್ಸ್ಪೆಕ್ಟರ್ ಸುದೀರ್ ಎಂ.ಬೆಂಕಿ ಅವರಿಗೆ ಸಲ್ಲಿಸಲಾಯಿತು.
ಪ್ರಕರಣ ದಾಖಲಿಸಿಕೊಳ್ಳಲು ಉದಾಸೀನ ಮಾಡಿದ ಕನಕಗಿರಿ ಪೊಲೀಸ್ ಠಾಣೆ ಅಧಿಕಾರಿ ಎಂ.ಡಿ.ಫಯಜುಲ್ಲಾ ಹಾಗೂ ಸಿಬ್ಬಂದಿ (ರೈಟರ್) ಪ್ರಭಾಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆ.29ರಂದು ಮರಿಯಮ್ಮಳ ತಂದೆ ಆಗೋಲಿಯ ಗಾಳೆಪ್ಪ ಕನಕಗಿರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಸ್ವೀಕರಿಸದೇ ಅಸಹಕಾರ ತೋರಿ, ಕೊನೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಿಯಮ್ಮಳ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ, ಕನಕಗಿರಿ ಠಾಣೆಯವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಘಟಕಗಳ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಯರಡೋಣ, ರಮೇಶ ಅಂಗಡಿ, ಹನುಮೇಶ ಸೂಳೆಕಲ್, ತಾಯಪ್ಪ ಗುಂಡೂರು, ವೆಂಕೋಬ ಕಾಟಾಪುರ, ಮರಿಸ್ವಾಮಿ, ನಾಗಪ್ಪ, ಹುಲಿಗೇಶ ಬುಕನಟ್ಟಿ, ಪರಶುರಾಮ, ಸುಮಿತ್ರಕುಮಾರ, ಮಂಜುನಾಥ ಬಡಿಗೇರ, ದ್ಯಾವಣ್ಣ ಗುಡೂರು, ನಾಗಪ್ಪ ಗೂಡಿನಾಳ, ಕೆಂಚಪ್ಪ ಬೇವಿನಹಳ್ಳಿ, ಹುಸೇನಪ್ಪ ಗುಂಡೂರಕ್ಯಾಂಪ್, ವೀರೇಶ ದೇವರಮನಿ, ಗೋಪಾಲ, ನಿಂಗಪ್ಪ ಮೈಲಾಪುರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.