ADVERTISEMENT

ಪ್ರಜಾವಾಣಿ@75: ರಂಗಭೂಮಿಯದ್ದು ನಿಜವಾದ ಗಟ್ಟಿ ಕಲೆ -ಶಾಸಕ ದೊಡ್ಡನಗೌಡ

‘ಪ್ರಜಾವಾಣಿ’ ಅಮೃತ ಮಹೋತ್ಸವದ ವರ್ಷಾಚರಣೆಯಲ್ಲಿ ಸಂಭ್ರಮಿಸಿದ ಕಲಾ ಪ್ರೇಮಿಗಳು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 4:27 IST
Last Updated 28 ಡಿಸೆಂಬರ್ 2022, 4:27 IST
ಹನುಮಸಾಗರದ ಕರಿಸಿದ್ದೇಶ್ವರ ಸಭಾ ಭವನದಲ್ಲಿ ‘ಪ್ರಜಾವಾಣಿ’ ಅಮೃತ ಮಹೋತ್ಸವದ ವರ್ಷಾಚರಣೆ ಅಂಗವಾಗಿ ಮಂಗಳವಾರ ನಡೆದ ನಾಟಕೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಹಾಗೂ ಮುಖಂಡ ಬಸವರಾಜ ಹಳ್ಳೂರ ಚಾಲನೆ ನೀಡಿದರು
ಹನುಮಸಾಗರದ ಕರಿಸಿದ್ದೇಶ್ವರ ಸಭಾ ಭವನದಲ್ಲಿ ‘ಪ್ರಜಾವಾಣಿ’ ಅಮೃತ ಮಹೋತ್ಸವದ ವರ್ಷಾಚರಣೆ ಅಂಗವಾಗಿ ಮಂಗಳವಾರ ನಡೆದ ನಾಟಕೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಹಾಗೂ ಮುಖಂಡ ಬಸವರಾಜ ಹಳ್ಳೂರ ಚಾಲನೆ ನೀಡಿದರು   

ಹನುಮಸಾಗರ: ‘ರಂಗಭೂಮಿಯದ್ದು ಗಟ್ಟಿ ಕಲೆಯಾಗಿದ್ದು, ಹಿಂದೆ ಮನರಂಜನೆಗೆ ಗ್ರಾಮಸ್ಥರು ರಂಗಭೂಮಿಯನ್ನೇ ಅವಲಂಬಿಸಿದ್ದರು’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಮಂಗಳವಾರ ಇಲ್ಲಿನ ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ನಿಸರ್ಗ ಸಂಗೀತ ವಿದ್ಯಾಲಯ, ರಂಗ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2022-23ನೇ ಸಾಲಿನ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಕಲಾವಿದರ ಸಂವಾದ ಹಾಗೂ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಸಂದರ್ಭದಲ್ಲಿ ಬಹುತೇಕ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದರು. ಆಗ ಅವರ ನೆರವಿಗೆ ಬಂದಿದ್ದೇ ಹನುಮಸಾಗರ ರಂಗ ಕಲಾವಿದರ ಸಂಘ ಎಂಬುದು
ಹೆಮ್ಮೆಯ ಸಂಗತಿ’ ಎಂದು ಅವರು ಹೇಳಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಮಾತನಾಡಿ, ‘ಇಲಾಖೆ ಮಕ್ಕಳಿಗೆ ಚಿಗುರು, ಯುವಜನರಿಗೆ ಯುವ ಸೌರಭ, ಸಾಂಸ್ಕೃತಿಕ ಸೌರಭ, ಗಿರಿಜನ ಉತ್ಸವ, ಪರಿಶಿಷ್ಟ ಜಾತಿಯ ಕಲಾವಿದರಿಗೆ ಜನಪದ ಉತ್ಸವ, ನೃತ್ಯ, ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವ ಅವಕಾಶ ನೀಡುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವರಾಜ ಹಳ್ಳೂರ ಮಾತನಾಡಿ,‘ಮೂರು ದಶಕಗಳಿಂದ ಕಲಾವಿದರ ಸೇವೆ ಮಾಡುತ್ತಿರುವ ಹನುಮಸಾಗರ ರಂಗ ಕಲಾವಿದರ ಸಂಘಕ್ಕೆ ರಾಜ್ಯ ಮಟ್ಟದ ಸರ್ಕಾರಿ ಗೌರವ ದೊರಕಬೇಕಾದ ಅವಶ್ಯಕತೆ ಇದೆ’ ಎಂದರು.

ಮುಖಂಡ ವಿಠಲ್‍ಶ್ರೇಷ್ಟಿ ನಾಗೂರ, ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಪ್ರಮೋದ ಕುಲಕರ್ಣಿ, ಮೈನುದ್ದೀನ್ ಖಾಜಿ, ಶಿಕ್ಷಕ ರಾಮಚಂದ್ರ ಬಡಿಗೇರ ಮಾತನಾಡಿದರು. ‘ಪ್ರಜಾವಾಣಿ’ ಪತ್ರಿಕೆಯ ಹಿರಿಯ ವಿತರಕ ಪ್ರಾಣೇಶಾಚಾರ್ಯ ಪುರೋಹಿತ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಕರಿಸಿದ್ದಪ್ಪ ಕುಷ್ಟಗಿ, ಗ್ರಾ.ಪಂ ಸದಸ್ಯರಾದ ರಮೇಶ ಬಡಿಗೇರ, ವಿಶ್ವನಾಥ ಯಾಳಗಿ, ಬಸವರಾಜ ದ್ಯಾವಣ್ಣವರ, ಮರೇಗೌಡ ಬೋದೂರ, ವೀರೇಶ ಕಟಗಿ, ಜ್ಯೋತಿ ಬಾಳೆಹಳ್ಳಿಮಠ, ಶ್ರೀನಿವಾಸ ಜಹಗೀರದಾರ, ಗುರುರಾಜ ದೇಸಾಯಿ, ಶ್ರೀದೇವಿ ಕೋಮಾರಿ ಹಾಗೂ ಮಲ್ಲಯ್ಯ ಕೋಮಾರಿ ಇದ್ದರು.

ವರದಿಗಾರ ಕಿಶನರಾವ್ ಕುಲಕರ್ಣಿ ಸ್ವಾಗತಿಸಿದರು.

ಬೀರಪ್ಪ ಕಡ್ಲಿಮಟ್ಟಿ ನಿರೂಪಿಸಿದರು. ಈರಣ್ಣ ಹುನಗುಂಡಿ ಅವರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.