ADVERTISEMENT

ವರದಿ ಫಲಶ್ರುತಿ: ಗ್ರಾಮಕ್ಕೆ ಬಂದ ಬಸ್– ವಿದ್ಯಾರ್ಥಿಗಳ ಸಂತಸ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 19:31 IST
Last Updated 7 ಸೆಪ್ಟೆಂಬರ್ 2021, 19:31 IST
ಕೊಪ್ಪಳ ತಾಲ್ಲೂಕಿನ ಅಳವಂಡಿ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಎಂ.ಎ.ಮುಲ್ಲಾ ಅವರು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು
ಕೊಪ್ಪಳ ತಾಲ್ಲೂಕಿನ ಅಳವಂಡಿ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಎಂ.ಎ.ಮುಲ್ಲಾ ಅವರು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು   

ಅಳವಂಡಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಳವಂಡಿ ಹೋಬಳಿಯ ಮೋರನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಬಸ್‌ ಆರಂಭಿಸಿದ್ದು, ಇದು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಈ ಕಾರಣ ಕೊಪ್ಪಳ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ, ವ್ಯವಸ್ಥಾಪಕ ಬಸವರಾಜ್, ಸಿಬ್ಬಂದಿ ನಾಗರಾಜ್ ಅವರು ಅಳವಂಡಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.

ಮುಂಡರಗಿ ಸಮೀಪದ,ತಾಲ್ಲೂಕಿನ ಕೊನೆಯ ಭಾಗದ ಹಳ್ಳಿಯಾದ ಇಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಅಳವಂಡಿಯ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಬರುತ್ತಾರೆ. ಎರಡು ವರ್ಷದಿಂದ ಸಂಚಾರ ರದ್ದು ಮಾಡಿದ್ದರಿಂದ ಬಸ್‌ಗಳು ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಪತ್ರಿಕೆಯ ವರದಿಯನ್ನು ನೋಡಿದ ಅಧಿಕಾರಿಗಳು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಮುಖ್ಯ ಶಿಕ್ಷಕ ಸುರೇಂದ್ರಗೌಡ ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದರು.

ADVERTISEMENT

ನಂತರ ಮಾತನಾಡಿದ ಮುಲ್ಲಾ, ‘ಕೊಪ್ಪಳ– ಮುಂಡರಗಿ ಮಾರ್ಗವಾಗಿ ಈಗಾಗಲೇ ಕೆಲವು ಬಸ್‌ಗಳು ಸಂಚಾರಿಸುತ್ತಿವೆ. ವಿದ್ಯಾರ್ಥಿಗಳು ಶಾಲೆಯ ಸಮಯಕ್ಕೆ ಬಸ್‌ ಓಡಿಸಲು ಮನವಿ ಮಾಡಿದ್ದಾರೆ. ಮೋರನಾಳ ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದ್ದೇವೆ. ಬೆಳಿಗ್ಗೆ 9 ಮತ್ತು ಮಧ್ಯಾಹ್ನ 1, ಸಂಜೆ 5ಕ್ಕೆ ಬಸ್‌ ಆರಂಭಿಸಿದ್ದೇವೆ' ಎಂದು ಹೇಳಿದರು.

‘ಪ್ರಜಾವಾಣಿ ವರದಿಯಿಂದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಯಿತು’ ಎಂದು ಗ್ರಾಮಸ್ಥರ ಹನಮಂತಪ್ಪ ಮೋರನಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.