ADVERTISEMENT

ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ: ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 13:23 IST
Last Updated 11 ಆಗಸ್ಟ್ 2023, 13:23 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಈಡಿಗ ಸಮುದಾಯದ ಜನಾರ್ದನ ಪೂಜಾರಿ, ಬಂಗಾರಪ್ಪ, ಆರ್‌.ಎಲ್‌. ಜಾಲಪ್ಪ ಅವರನ್ನು ರಾಜಕೀಯವಾಗಿ ಮುಗಿಸಿದ ರೀತಿಯಲ್ಲಿಯೇ ಈಗ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಮುಗಿಸಲು ಕಾಂಗ್ರೆಸ್‌ನಲ್ಲಿ ಹುನ್ನಾರ ನಡೆಯುತ್ತಿದೆ’ ಎಂದು ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಹರಿಪ್ರಸಾದ್ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ನಾಯಕ. ಯಾವುದೇ ಕಪ್ಪುಚುಕ್ಕೆಗಳಿಲ್ಲ. ಬೇರೆ ಪಕ್ಷದಿಂದ ವಲಸೆಯೂ ಬಂದಿಲ್ಲ. ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಸಚಿವ ಸ್ಥಾನ ನೀಡಿಲ್ಲ. ಇದರಿಂದ ಸಮುದಾಯಕ್ಕೆ ಬೇಸರವಾಗಿದೆ’ ಎಂದರು.

’ಈ ಕುರಿತು ನಮ್ಮ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಸಭೆಗಳನ್ನು ನಡೆಸಲಾಗುತ್ತಿದೆ. ಈಡಿಗ ಸಮುದಾಯದ ಆರ್ಥಿಕ ಕುಲಕಸುಬಿಗೆ ಪೆಟ್ಟು ನೀಡುವ ಉದ್ದೇಶದಿಂದಾಗಿಯೇ 2004ರಲ್ಲಿ ಸೇಂದಿ, 2007ರಲ್ಲಿ ಸಾರಾಯಿ ಬಂದ್‌ ಮಾಡಿಸಿ ಈಗ ಸಮುದಾಯದ ನಾಯಕರಿಗೆ ರಾಜಕೀಯ ಆಸ್ತಿತ್ವ ಇಲ್ಲದಂತೆ ಮಾಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಹರಿಪ್ರಸಾದ್‌ ಅವರಿಗೆ ಸಚಿವಸ್ಥಾನ ನೀಡುವಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಿಫಾರಸು ಮಾಡಿದ್ದರು. ಆದರೆ, ಶಿಫಾರಸು ಪತ್ರ ರಾಜ್ಯ ತಲುಪುವುದರ ಒಳಗೆ ಹರಿಪ್ರಸಾದ್‌ ಹೆಸರು ನಾಪತ್ತೆಯಾಗಿದ್ದು, ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ನಿಷ್ಠರಾಗಿದ್ದರೂ ಸ್ಥಾನಮಾನ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದರು.

‘ಇದೆಲ್ಲವನ್ನು ವಿರೋಧಿಸಿ ಹಾಗೂ ನಮ್ಮ ಸಮುದಾಯದ ನಾಯಕರಿಗೆ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಸೆಪ್ಟೆಂಬರ್‌ 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಒಕ್ಕೂಟದ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.