ADVERTISEMENT

ಗಂಗಾವತಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇಲಾಖೆ ಸಜ್ಜು, ಹೋಬಳಿಗೊಂದು ವಾಹನ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 6:40 IST
Last Updated 13 ಜುಲೈ 2021, 6:40 IST
ಆನೆಗುಂದಿ ಶಾಲೆಯ ಶಿಕ್ಷಕರು ಮಕ್ಕಳ ಮನೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ದತೆ ಕುರಿತು ಪಾಲಕರಿಗೆ ಮಾಹಿತಿ ನೀಡಿದರು
ಆನೆಗುಂದಿ ಶಾಲೆಯ ಶಿಕ್ಷಕರು ಮಕ್ಕಳ ಮನೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ದತೆ ಕುರಿತು ಪಾಲಕರಿಗೆ ಮಾಹಿತಿ ನೀಡಿದರು   

ಗಂಗಾವತಿ: ರಾಜ್ಯ ಸರ್ಕಾರದ ಆದೇಶ, ಕೊರೊನಾ ಸಂಕಷ್ಟ, 3ನೇ ಅಲೆಯ ಆತಂಕದ ನಡುವೆಯೇ ಜು.19 ರಿಂದ 22ರವರೆಗೆ ನಡೆಯುವಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವಿವಿಧ ರೀತಿಯ ಸಿದ್ಧತೆ ಮಾಡಿಕೊಂಡು ಗಮನ ಸೆಳೆದಿದೆ.

ಈಗಾಗಲೇ ತಾಲ್ಲೂಕಿನಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 33 ಪರೀಕ್ಷಾ ಕೇಂದ್ರ ಸಜ್ಜುಗೊಳಿಸಲಾಗಿದೆ. ಅದರಲ್ಲಿಪುನರಾವರ್ತಿತ1, ಕಾಯ್ದಿರಿಸಿದ ಕೇಂದ್ರಗಳಾಗಿ2 ಇವೆ. ಪರೀಕ್ಷೆಗೂ ಮುನ್ನ ಮತ್ತು ನಂತರ ಎಲ್ಲ ಕೇಂದ್ರದ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿಸಲಿದ್ದು, ಪ್ರತಿ ಕೇಂದ್ರಕ್ಕೆ ಒಂದು ಐಸೋಲೇಶನ್ ಕೊಠಡಿ ವ್ಯವಸ್ಥೆ ಮಾಡಿದೆ.

ಪರೀಕ್ಷಾರ್ಥಿಗಳ ಸಂಖ್ಯೆ: ತಾಲ್ಲೂಕಿನಲ್ಲಿ ಒಟ್ಟು 7780 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ ರೆಗ್ಯುಲರ್ 6528,ಪುನರಾವರ್ತಿತ 1035, ಖಾಸಗಿ ಶಾಲೆಯ ರೆಗ್ಯುಲರ್ 170,ಪುನರಾವರ್ತಿತ 46, ಬೇರೆ ಶಾಲೆಯಿಂದ ಗಂಗಾವತಿ ತಾಲ್ಲೂಕಿನ ಕೇಂದದಲ್ಲಿ (ಮೈಗ್ರೇನ್‌) 85 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ADVERTISEMENT

ಪರೀಕ್ಷೆ ವೇಳೆಯಲ್ಲಿ ಆರೋಗ್ಯ ಇಲಾಖೆಸಿಬ್ಬಂದಿ ನಿಗಾ ವಹಿಸಲಿದ್ದಾರೆ.

ಪರೀಕ್ಷೆ ಸಿಬ್ಬಂದಿ:ಈ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಒಟ್ಟು 792 ಸಿಬ್ಬಂದಿ ನೇಮಕ ಮಾಡಿದ್ದು, ಅದರಲ್ಲಿ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು, ರೂಟ್ ಆಫಿಸರ್ಸ್ಸಿಬ್ಬಂದಿ ಇರಲಿದ್ದಾರೆ. ಈಗಾಗಲೇ ಎಲ್ಲರೂ ಲಸಿಕೆ ಪಡೆದಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ 14 ರಸ್ತೆಗಳ ಮೂಲಕ ಪ್ರಶ್ನೆ ಪತ್ರಿಕೆ ರವಾನಿಸುವ ಯೋಜನೆ ಹಾಕಿಕೊಂಡಿದ್ದಾರೆ.

ವಾಹನ ಸೌಲಭ್ಯ:ತಾಲ್ಲೂಕಿನಲ್ಲಿ ನಿಯೋಜಿಸಲಾದ 33 ಕೇಂದ್ರಗಳು ಆಯಾ ಭಾಗದ ವಿದ್ಯಾರ್ಥಿಗಳಿಗೆ 3 ಕಿ.ಮೀ ಅಂತರದಲ್ಲಿವೆ. ಪ್ರತಿಯೊಂದು ಹೋಬಳಿಗೂ ಶಿಕ್ಷಣ ಇಲಾಖೆ ವ್ಯಾನ್ ವ್ಯವಸ್ಥೆ ಮಾಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ.

ಮನೆ ಬಾಗಿಲಿಗೆ ಹೋಗಿ ಪಾಠ

ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಓಎಂಆರ್ ಶೀಟ್, ಪರೀಕ್ಷೆ ವಿಧಾನದ ಬಗ್ಗೆ ತಿಳಿಸಿದ್ದಾರೆ. ಮೊದಲ ಪ್ರಶ್ನೆ ಪತ್ರಿಕೆಯಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಎರಡನೇ ಪ್ರಶ್ನೆ ಪತ್ರಿಕೆ ಕನ್ನಡ, ಇಂಗ್ಲಿಷ್, ಹಿಂದಿ ಇರಲಿದೆ. ಈ ಪತ್ರಿಕೆಗಳ ಓಎಂಆರ್ ಶೀಟ್ ಬೇರೆ, ಬೇರೆ ಬಣ್ಣದಲ್ಲಿ ಇರುತ್ತವೆ ಎಂಬುವುದನ್ನು ಮಾದರಿಯಾಗಿ ತೋರಿಸಿದ್ದಾರೆ.

ಜೊತೆಗೆ ಶಾಲೆಗಳಲ್ಲಿ ಅಣಕು ಪರೀಕ್ಷೆ ಮಾಡುವ ಮೂಲಕ ಪ್ರಶ್ನೆ ಪತ್ರಿಕೆ ಮಾದರಿಯ ಕುರಿತು ಜಾಗೃತಿ ಮೂಡಿಸಿದ್ದಾರೆ. ಈ ಪರೀಕ್ಷೆಗಳ ವೇಳೆಯಲ್ಲಿ ಸ್ವಯಂ ಸೇವಕರಾಗಿ ಶಿಸ್ತು ಕಾಪಾಡಲು ಶಿಕ್ಷಣ ಇಲಾಖೆ ಸ್ಕೌಟ್ಸ್ ಮತ್ತು ಗೈಡ್ಸ್, ಪೋಲಿಸ್ ಸಿಬ್ಬಂದಿ ನೇಮಿಸಲಾಗಿದೆ. ಹೀಗೆ ಕೋವಿಡ್ ಮಾರ್ಗಸೂಚಿಗಳ ಮೂಲಕ ಪರೀಕ್ಷೆ ಸಿದ್ಧತೆ ಜಿಲ್ಲೆಯಲ್ಲಿ ಗಮನ ಸೆಳೆದಿದೆ.

***

ಪ್ರತಿ ಕೇಂದ್ರದಲ್ಲಿ 5 ಕಡೆ ನೋಂದಣಿ ಸಂಖ್ಯೆಯ ಸೂಚನಾ ಫಲಕ ಅಳವಡಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಮುಂಚಿತವಾಗಿಯೇ ಗುರುತಿಸಿಕೊಳ್ಳಲು ಅವಕಾಶ ನೀಡಲಾಗುವುದು

- ಸೋಮಶೇಖರಗೌಡ, ಬಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.