ಕೊಪ್ಪಳ: ತಾಲ್ಲೂಕಿನ ಇರಕಲ್ಗಡ ಹೋಬಳಿ ವ್ಯಾಪ್ತಿಯ ಅರಸಿನಕೆರೆಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೇ ಭೂಮಿ ಬಿಟ್ಟುಕೊಡಬೇಕು. ರೈತರನ್ನು ಒಕ್ಕಲೆಬ್ಬಿಸಲು ಹುನ್ನಾರ ಕೈ ಬಿಡಬೇಕು ಎಂದು ರಾಜಕೀಯ ನಾಯಕರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ತಾಲ್ಲೂಕು ಕ್ರೀಡಾಂಗಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್.ಆರ್. ಶ್ರೀನಾಥ್ ಹಾಗೂ ಕರಿಯಣ್ಣ ಸಂಗಟಿ ಮಾತನಾಡಿ ‘ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ಅರಸಿನಕೆರೆ ಗ್ರಾಮದ ಸುಮಾರು 200 ರೈತರ ಜಮೀನನ್ನು ಅರಣ್ಯ ಇಲಾಖೆಯು ಕಂದಾಯ ಇಲಾಖೆಗೆ ಪತ್ರ ಬರೆದು ಭೂಮಿ ಹಸ್ತಾಂತರಿಸುವಂತೆ ಕೋರಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ’ ಎಂದರು.
’ಈಗಿನ ಭೂಮಿಗೆ ಸರ್ಕಾರ ಕೆಲವರಿಗೆ ಮಾಲೀಕತ್ವದ ಹಕ್ಕು ಕೊಟ್ಟಿದೆ. ಆದರೂ ರೈತರಿಗೆ ಭೂಮಿ ಮಂಜೂರು ಮಾಡುತ್ತಿಲ್ಲ. ಸರ್ಕಾರ ಈ ಕುರಿತು ಆದಷ್ಟು ಬೇಗನೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಅನ್ನದಾತರ ನೆರವಿಗೆ ಧಾವಿಸಬೇಕು’ ಎಂದರು ಆಗ್ರಹಿಸಿದರು.
ಅರಸಿನಕೆರೆ ಭಾಗದ ರೈತರಿಗೆ ಕರಡಿ ಕಾಟ ಹೆಚ್ಚಾಗಿದ್ದು, ಪ್ರಾಣಿಯಿಂದ ನಮ್ಮನ್ನು ರಕ್ಷಿಸಬೇಕು. ನಮ್ಮ ಭೂಮಿ ನಮ್ಮ ಹಕ್ಕು, ಉಳುವವನೇ ಭೂಮಿಯ ಒಡೆಯ, ಭೂಮಿಗಾಗಿ ಹೋರಾಟ ಎನ್ನುವ ಭಿತ್ತಿಪತ್ರಗಳನ್ನು ರೈತರು ಪ್ರದರ್ಶಿಸಿದರು. ವಿವಿಧ ಗ್ರಾಮಗಳ ರೈತ ಮುಖಂಡರು ಮತ್ತು ಇರಕಲ್ಗಡ ಹೋಬಳಿ ಜನ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.