ADVERTISEMENT

ಪ್ರಕರಣ ವಾಪಸ್‌ಗೆ ಸಿಎಂ ಎದುರು 15ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 8:43 IST
Last Updated 13 ಡಿಸೆಂಬರ್ 2022, 8:43 IST

ಕೊಪ್ಪಳ: ಒಳಮೀಸಲಾತಿ ಜಾರಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ವೇಳೆ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿ ದಾಖಲಿಸಿದ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಮಾದಿಗ ಮಹಾಸಭಾ ಜಿಲ್ಲೆಯ ಮುಖಂಡರು ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹನುಮೇಶ ಕಡೇಮನಿ, ನಿಂಗಜ್ಜ ಬಂಡಿಹರ್ಲಾಪುರ, ಮಲ್ಲಿಕಾರ್ಜುನ ಪೂಜಾರ, ಯಲ್ಲಪ್ಪ ಹಳೇಮನಿ ಮತ್ತು ಲಕ್ಷ್ಮಣ ಬೇವಿನಗಿಡ ‘ಶಾಂತಿಯುತ ಹೋರಾಟ ಮಾಡುತ್ತಿದ್ದರೂ ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್‌ ಮಾಡಿದ್ದಾರೆ. ಇದರಿಂದ ಜಿಲ್ಲೆಯ 30–40 ಜನ ಹೋರಾಟಗಾರರಿಗೆ ಗಾಯಗಳಾಗಿವೆ. ಪ್ರಕರಣಗಳನ್ನೂ ದಾಖಲಿಸಲಾಗಿದ್ದು, ಅವುಗಳನ್ನು ವಾಪಸ್‌ ಪಡೆಯಬೇಕು ಎಂದು ಡಿ. 15ರಂದು ಕೊಪ್ಪಳಕ್ಕೆ ಬರಲಿರುವ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು’ ಎಂದರು.

‘ಮಾತುಕತೆ ಮೂಲಕ ನಮ್ಮ ಮನವಿಯನ್ನು ಮುಖ್ಯಮಂತ್ರಿ ಆಲಿಸಿದರೆ ನಮಗಾದ ಸಮಸ್ಯೆಯನ್ನು ಅವರ ಮುಂದೆ ಹೇಳಿಕೊಳ್ಳುತ್ತೇವೆ. ಅವಕಾಶ ಕೊಡದಿದ್ದರೆ ಪ್ರತಿಭಟನೆ ಮಾಡುತ್ತೇವೆ’ ಎಂದು ತಿಳಿಸಿದರು. ಲಾಠಿಚಾರ್ಜ್‌ನಲ್ಲಿ ಗಾಯಗೊಂಡ ಹೋರಾಟಗಾರರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದೂ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.