ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗಟ್ಟಿ: ಶಿವಪ್ಪ ಜಾಗೊಗೋರ್

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:10 IST
Last Updated 31 ಮೇ 2022, 4:10 IST
ಗಂಗಾವತಿ ನಗರದ 31ನೇ ವಾರ್ಡಿನ ವಿರುಪಾಪುರ ತಾಂಡ ದಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ಗೋರಸೇನಾ ತಾಲ್ಲೂಕು ಘಟಕದ ಸದಸ್ಯರು ಸೇವಾಲಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಗಂಗಾವತಿ ನಗರದ 31ನೇ ವಾರ್ಡಿನ ವಿರುಪಾಪುರ ತಾಂಡ ದಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ಗೋರಸೇನಾ ತಾಲ್ಲೂಕು ಘಟಕದ ಸದಸ್ಯರು ಸೇವಾಲಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ಗಂಗಾವತಿ: ಇಲ್ಲಿನ 31ನೇ ವಾರ್ಡಿನ ವಿರುಪಾಪುರ ತಾಂಡದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ಗೋರಸೇನಾ ತಾಲ್ಲೂಕು ಘಟಕದ ಸದಸ್ಯರು ಸೇವಾಲಾಲ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಉಪಾಧ್ಯಕ್ಷ ಅಧ್ಯಕ್ಷ ಶಿವಪ್ಪ ಜಾಗೊಗೋರ್ ಮಾತನಾಡಿ, ವಿರುಪಾಪುರ ತಾಂಡದ ಸೇವಾಲಾಲ್ ವೃತ್ತದಿಂದ ಆರಂಭಿಸಿ ಬೇಥಲ್ ಶಾಲೆ ಸಮೀಪದವರೆಗೆ ಇರುವ ಎಲ್ಲ ಪಾನ್ ಶಾಪ್, ಹೊಟೇಲ್,ಅಂಗಡಿ, ಮನೆ, ಓಣಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಈ ಅಂಗಡಿಗಳ 30 ಅಡಿ ಸಮೀಪದಲ್ಲಿ ದೇವಸ್ಥಾನ, ಶಾಲೆಗಳಿದ್ದು, ಮಕ್ಕಳಿಗೆ ತುಂಬಾ ತೊಂದರೆ ಆಗಿದೆ. ಇಲ್ಲಿ ಕೂಲಿ ಮಾಡಿ ಜೀವನ ನಡೆಸುವವರ ಸಂಖ್ಯೆ ಬಹಳ ಇದ್ದು, ಯುವಕರು ಮದ್ಯಕ್ಕೆ ದಾಸರಾದ ಕಾರಣ ಸಾಕಷ್ಟು ಕುಟುಂಬಗಳ ಸಂಸಾರಗಳು ಬೀದಿ ಪಾಲಾಗಿವೆ ಎಂದರು.

ಇನ್ನೂ ಕುಡಿದ ಅಮಲಿನಲ್ಲಿ ಯುವಕರು ಮನೆಯಲ್ಲಿನ ಮಹಿಳೆಯರಿಗೆ ಹೊಡೆಯುವುದು, ರಸ್ತೆಗೆ ನಿಲ್ಲಿವುದು, ಯುವತಿಯರನ್ನು ಚುಡಾಯಿಸುವ ಕೆಲಸ ಮಾಡುತ್ತಿದ್ದಾರೆ. 31ನೇ ವಾರ್ಡಿಗೆ ಆನೆಗೊಂದಿ ಬಾರಿನ ಮಂಜುನಾಥ, ಲಲಿತ್ ಮಹಲ್ ವ್ಯವಸ್ಥಾಪಕ ಪಂಪಾವತಿ ಅವರು ಮದ್ಯ ಮಾರಾಟ ಮಾಡುತ್ತಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ, ಆದರೆ ಸ್ಪಂದನೆ ದೊರೆತಿಲ್ಲ. ಕೂಡಲೇ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ADVERTISEMENT

ಇದಕ್ಕೂ ಮುನ್ನ ಸೇವಾಲಾಲ್ ವೃತ್ತದಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ 25 ನಿಮಿಷಗಳ ಕಾಲ ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು. ನಗರಠಾಣೆಯ ಪಿಐ ವೆಂಕಟಸ್ವಾಮಿ ನೇತೃತ್ವದಲ್ಲಿನ ಪೋಲಿಸ್ ಸಿಬ್ಬಂದಿ ಪ್ರತಿಭಟನೆ ಮುಂದಕ್ಕೆ ಸಾಗುವಂತೆ ಮಾಡಿದರು.

ತಾಲ್ಲೂಕು ಅಧ್ಯಕ್ಷ ಕೃಷ್ಣನಾಯಕ, ರವಿ ರಾಠೋಡ್, ವೆಂಕಟೇಶ ಜಾಧವ್, ಕುಮಾರ ಸೇರಿದಂತೆ ಗೋರ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.