ಕುಕನೂರು: ಇಷ್ಟುದಿನ ಕಟ್ಟಡಗಳ ಮೇಲೆ ಬಿದ್ದ ಮಳೆನೀರು ಹರಿದು ಪೋಲಾಗುತ್ತಿತ್ತು. ಆದರೆ, ಈ ಬಾರಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಮಳೆನೀರು ಸಂರಕ್ಷಣೆ ಘಟಕಗಳಲ್ಲಿ ಸಂಗ್ರಹವಾಗಿರುವ ನೀರು ಈಗ ಮರುಬಳಕೆಗೆ ಲಭ್ಯವಾಗುತ್ತಿದೆ.
ತಾಲ್ಲೂಕಿನ 15 ಗ್ರಾಮ ಪಂಚಾಯಿತಿ ಕಟ್ಟಡಗಳು ಹಾಗೂ ಕೆಲ ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ 26 ಮಳೆನೀರು ಸಂರಕ್ಷಣೆ ಘಟಕ ನಿರ್ಮಾಣ ಮಾಡಲಾಗಿದ್ದು, ಈ ಬಾರಿಯ ಮಳೆಗೆ ಘಟಕಗಳು ಭರ್ತಿಯಾಗಿವೆ.
ಇದರಿಂದ ಬೇಸಿಗೆ ಕಾಲದಲ್ಲಿ ಪಂಚಾಯಿತಿ ಆವರಣದಲ್ಲಿರುವ ಸಸಿಗಳಿಗೆ, ಶೌಚಾಲಯಕ್ಕೆ ಮಳೆನೀರು ಬಳಕೆಯಾಗಲಿವೆ. ಇಟಗಿ, ಯರೇಹಂಚಿನಾಳ, ರಾಜೂರು, ಬನ್ನಿಕೊಪ್ಪ ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡಕ್ಕೆ ನಿರ್ಮಾಣ ಮಾಡಿದ್ದ 6.7 ಮೀಟರ್ (20 ಅಡಿ) ಉದ್ದ, 3 ಮೀಟರ್(10 ಅಡಿ) ಅಗಲ ಹಾಗೂ 1.8 ಮೀಟರ್ (8 ಅಡಿ) ಆಳ ಇರುವ ಇರುವ 35,000 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಇದಕ್ಕೆ 2021-22ನೇ ಸಾಲಿನ ನರೇಗಾದಡಿ ₹ 2 ಲಕ್ಷ ವೆಚ್ಚ ಖರ್ಚು ಮಾಡಲಾಗಿದೆ.
ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಟ್ಯಾಂಕ್ನಲ್ಲಿ ಸಂಗ್ರಹಿಸುವುದು, ಈ ನೀರನ್ನು ಮರುಬಳಕೆ ಮಾಡಬೇಕು ಎಂಬ ಸದುದ್ದೇಶ ಹೊಂದಲಾಗಿದೆ. ಮಳೆ ಬಂದರೆ ಮೊದಲು ಗ್ರಾಮ ಪಂಚಾಯಿತಿ ಕಟ್ಟಡದ ಛಾವಣಿಯಿಂದ ಆವರಣದಲ್ಲಿ ನೀರು ಸಂಗ್ರಹವಾಗಿ ಓಡಾಡಲು ಸಮಸ್ಯೆ ಆಗುತ್ತಿತ್ತು. ಈಗ ಅಂತಹ ಸಮಸ್ಯೆಗೆ ಮುಕ್ತಿ ದೊರೆತಿದೆ. ನರೇಗಾದಡಿ ಛಾವಣಿ ದುರಸ್ತಿ ಮಾಡಿ ಪೈಪ್ ಜೋಡಿಸಲಾಗಿದೆ. ಈ ಪೈಪ್ನಿಂದ ಕೆಳಗಡೆ ಇರುವ ಟ್ಯಾಂಕ್ನಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ಇನ್ನು ಸಂಗ್ರಹವಾದ ನೀರನ್ನು ಶೌಚಾಲಯ ಬಳಕೆಗೆ, ಆವರಣದಲ್ಲಿರುವ ಗಿಡಗಳಿಗೆ ನೀರುಣಿಸಲು ಸಹಕಾರಿಯಾಗಲಿದೆ. ಬೇಸಿಗೆ ಕಾಲದಲ್ಲಿ ಉಂಟಾಗುವ ನೀರಿನ ಸಮಸ್ಯೆಗೂ ಈ ಟ್ಯಾಂಕ್ನಿಂದ ನೀರು ಪಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.