ಕೊಪ್ಪಳ: ‘ಬಿ.ಆರ್. ಅಂಬೇಡ್ಕರ್ ಅವರು ಉನ್ನತ ವ್ಯಾಸಂಗಕ್ಕೆ ಛತ್ರಪತಿ ಶಾಹು ಮಹಾರಾಜರಿಂದ ವಿದ್ಯಾರ್ಥಿ ವೇತನ ಪಡೆದು ಅಮೆರಿಕಕ್ಕೆ ಹೋಗುವ ಸಂದರ್ಭದಲ್ಲಿ ಅವರ ಪತ್ನಿ ರಮಾಬಾಯಿ ತುಂಬು ಗರ್ಭಿಣಿ. ಹೆರಿಗೆ ನಂತರದ ಕೆಲವೇ ದಿನಗಳಲ್ಲಿ ಆ ಮಗು ಮೃತಪಡುತ್ತದೆ. ಈ ವಿಷಯ ತಿಳಿಸಿದರೆ ಎಲ್ಲಿ ಗಂಡನ ಅಧ್ಯಯನಕ್ಕೆ ತೊಂದರೆಯಾಗುತ್ತದೆಯೊ ಎನ್ನುವ ಆತಂಕದಿಂದ ವಿಷಯ ತಿಳಿಸದೆ ಮಗುವಿನ ಅಂತ್ಯ ಸಂಸ್ಕಾರ ಮಾಡುತ್ತಾಳೆ‘
ಇದು ಶನಿವಾರ ರಾತ್ರಿ ಸಾಹಿತ್ಯ ಭವನದಲ್ಲಿ ನಡೆದ 'ರಮಾಬಾಯಿ ಅಂಬೇಡ್ಕರ್ 'ನಾಟಕದಲ್ಲಿ ಕಂಡು ಬಂದ ದೃಶ್ಯ. ತಾಯಿಯ ಸಂಕಟ, ವೇದನೆ, ಆಕ್ರಂದನ ನಾಟಕ ನೋಡಲು ಸೇರಿದ್ದ ಜನರ ಕಣ್ಣುಗಳನ್ನೂ ತೇವ ಮಾಡಿದ್ದವು. ಕೊನೆಯ ತನಕವೂ ನಾಟಕ ಜನರ ಮೆಚ್ಚುಗೆ ಗಳಿಸಿತು.
ಚಾಲನೆ: ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ ‘ದೇಶದ ಆಡಳಿತದ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಇರಬೇಕು, ಬಹುತ್ವ ಭಾರತದಲ್ಲಿ ಎಲ್ಲಾ ವರ್ಗದ ಜನರಿಗೆ ನ್ಯಾಯ ಸಿಗಬೇಕು ಎಂದು ಯೋಚಿಸಿ ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನ ಕೊಟ್ಟಿದ್ದಾರೆ. ಅವರು ಕೊಟ್ಟ ಸಂವಿಧಾನದಿಂದಲೇ ಇಂಥ ಈ ಗೌರವ, ಸ್ಥಾನಮಾನ ಸಿಕ್ಕಿದೆ‘ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ತಾಲ್ಲೂಕಿನ ದದೇಗಲ್ನ ಸಿದ್ದರೂಢ ಮಠದ ಆತ್ಮಾನಂದ ಭಾರತಿ ಸ್ವಾಮೀಜಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ್ ಮ್ಯಾಗಳಮನಿ, ಹನುಮಂತಪ್ಪ ಚಲವಾದಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ತಗಡಿನಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೋಳಿಬಸಯ್ಯ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲಣ್ಣವರ, ನಾಟಕ ಅಕಾಡೆಮಿ ಸದಸ್ಯ ಚಾಂದ್ಪಾಷಾ ಕಿಲ್ಲೇದಾರ, ಗುರುರಾಜ್ ಕುಲಕರ್ಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.