ADVERTISEMENT

ಪ್ರವರ್ಗ-1ಕ್ಕೆ ಸೌಲಭ್ಯ ನೀಡಿ: ಧನರಾಜ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:18 IST
Last Updated 7 ಏಪ್ರಿಲ್ 2022, 4:18 IST
ಈ.ಧನರಾಜ
ಈ.ಧನರಾಜ   

ಕೊಪ್ಪಳ:ಪ್ರವರ್ಗ -1ರಸಮುದಾಯಕ್ಕೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸಮಾನಾಂತರವಾಗಿ ಶೈಕ್ಷಣಿಕ ಸೌಲಭ್ಯ ನೀಡಬೇಕು ಎಂದು ಜಿಲ್ಲಾ ಪ್ರವರ್ಗ-1 ಜಾತಿಗಳ ಒಕ್ಕೂಟ ಅಧ್ಯಕ್ಷ ಈ. ಧನರಾಜ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರ ಹಿಂದೆ ಪ್ರವರ್ಗ -1 ರ ವಿದ್ಯಾರ್ಥಿಗಳಿಗೆ ಎಸ್ಸಿ- ಎಸ್ಟಿ ಸೌಲಭ್ಯ ಇದ್ದವು. ಆದರೀಗ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ಈ ಹಿಂದೆ ಇದ್ದಂತೆ ಮೀಸಲು ಮುಂದುವರಿಸಬೇಕು ಎಂದು ಅವರು ತಿಳಿಸಿದರು.

ಪ್ರವರ್ಗ 1 ರ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರತ್ಯೇಕವಾಗಿ ಮೀಸಲಾತಿ ಸೌಲಭ್ಯ ನೀಡಬೇಕು. ಇಬ್ಬರು ಶಾಸಕರಿಗೆ ಸಚಿವ ಸಂಪುಟ ಪುನರ್ ರಚನೆಯಲ್ಲಿ ಸ್ಥಾನ ಕಲ್ಪಿಸಬೇಕು. ಪ್ರವರ್ಗ 1ರ ಅಭಿವೃದ್ಧಿ ನಿಗಮಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು ಎಂದರು.

ADVERTISEMENT

ಪ್ರವರ್ಗ– 1ರ ಜಾತಿಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು. ಪ್ರವರ್ಗ– 1ರ ಎಲ್ಲ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸುವ ಕಾರ್ಯಕ್ಕೆ ₹5 ಕೋಟಿ ಮೀಸಲಿಡಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 177 ಕ್ಷೇತ್ರಗಳಲ್ಲಿ ಪ್ರವರ್ಗ 1 ರ ಜನರು ಇದ್ದಾರೆ. ಇದರಲ್ಲಿ 61 ಕ್ಷೇತ್ರಗಳಲ್ಲಿ ಬಹುಸಂಖ್ಯಾತ ಮತದಾರರು ಇದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 5 ಲಕ್ಷ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 1 ವಿಧಾನಸಭಾ ಟಿಕೆಟ್ ಅನ್ನು ಪ್ರವರ್ಗ– 1ಕ್ಕೆಎಲ್ಲ ರಾಜಕೀಯ ಪಕ್ಷಗಳು ಮೀಸಲಿಡಬೇಕು. ಜಿಲ್ಲೆಯಲ್ಲಿ ಕನಿಷ್ಠ 5 ಜಿ.ಪಂ. ಕ್ಷೇತ್ರಗಳಿಗೆ ಅವಕಾಶ ಹಾಗೂ ಎಲ್ಲ ವಸತಿ ನಿಲಯಗಳಲ್ಲಿ ಶೇ 10ರಷ್ಟು ಸ್ಥಾನ ಮೀಸಲಿಡಬೇಕು ಎಂದುಒತ್ತಾಯಿಸಿದರು.

ಪ್ರವರ್ಗ– 1 ರ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಜಾತಿಯ ಜನಾಂಗಗಳ ಮುಂದೆ ಅಲೆಮಾರಿ ಎಂದು ಜಾತಿಯ ಪ್ರಮಾಣ ಪತ್ರದಲ್ಲಿ ನಮೂದಿಸಬೇಕು.‌ ಪ್ರವರ್ಗ– 1ರ ಜಾತಿಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದರು .ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿ ಕುರಗೋಡು ಯಾದವ್, ಗೌರವ ಸಲಹೆಗಾರ ರಮೇಶ್ ಗೌಳಿ, ಕಲಾಲ್ ಸಮಾಜದ ಗೋಪಾಲ್, ಹುಲಗಿ ಬೈಲ ಪತ್ತಾರ್ ಸಮುದಾಯದ ಪ್ರಕಾಶ್, ಉಪ್ಪಾರ ಸಮಾಜದ ಬಸವರಾಜ ಮೂಲಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.