
ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ಸೀಮೆ ಹಾಗೂ ಭೂಮಿಯಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಸ್ಥಳದ ಮೇಲೆ ಮಂಗಳವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದು, ಎಂಟು ಹಿಟಾಚಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮರಳು ಕಳ್ಳತನ ಮಾಡಿದ ಆರೋಪದ ಮೇಲೆ ಎಂಟು ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗಂಗಾವತಿ ಪೊಲೀಸ್ ಉಪ ವಿಭಾಗಾಧಿಕಾರಿ ಜಾಯಪ್ಪ ನ್ಯಾಮಗೌಡ ಹಾಗೂ ಪೊಲೀಸ್ ಇನ್ಸ್ಟೆಕ್ಟರ್ ಎಂ.ಡಿ. ಫೈಜುಲ್ಲಾ ನೇತೃತ್ವದಲ್ಲಿ ನಸುಕಿನ ಜಾವ ದಾಳಿ ನಡೆದಿದೆ. ಯಾವುದೇ ದಾಖಲಾತಿ ಇಲ್ಲದೆ ಅಕ್ರಮವಾಗಿ ಹಿಟಾಚಿಯಿಂದ ಟ್ರ್ಯಾಕ್ಟರಿಯ ಟ್ರಾಲಿಯಲ್ಲಿ ಮರಳು ತುಂಬುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪನ್ನಾಪುರದ ಬಸನಗೌಡ, ನವಲಿಯ ವಿರೂಪಣ್ಣ ಕಲ್ಲೂರ, ಫೀರಸಾಬ, ಹನುಮಂತ ಕಲ್ಲೂರ, ಜಡಿಯಪ್ಪ ಭೋವಿ, ವೀರೇಶ ಹರಿಜನ, ರಾಮಣ್ಣ ಗಾಳಿ ಮತ್ತು ರಾಮಣ್ಣ ದನಕಾಯರ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.