ADVERTISEMENT

ಸಂತ ಸೇವಾಲಾಲ್‌ ಪವಾಡ ಪುರುಷ

ಸಂತ ಸೇವಾಲಾಲ್‌ ಜಯಂತಿಯಲ್ಲಿ ಶಾಸಕ ಹಾಲಪ್ಪ ಆಚಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:53 IST
Last Updated 23 ಫೆಬ್ರುವರಿ 2020, 10:53 IST
ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಹಾಲಪ್ಪ ಆಚಾರ್ ನಿವಾರ ಸೇವಾಲಾಲ್ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು
ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಹಾಲಪ್ಪ ಆಚಾರ್ ನಿವಾರ ಸೇವಾಲಾಲ್ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು   

ಕುಕನೂರು: ‘ಬಂಜಾರ ಸಮುದಾಯದ ಕುಲ ಸಂತ ಸೇವಾಲಾಲ್ ಒಬ್ಬ ಪವಾಡ ಪುರುಷ’ ಎಂದು ಶಾಸಕ ಹಾಲಪ್ಪ ಆಚಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಬಂಜಾರ ಜನಾಂಗದ ವತಿಯಿಂದ ಶನಿವಾರ ನಡೆದ ಸೇವಾಲಾಲ್‌ರ 281ನೇ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಲೋಕ ಕಲ್ಯಾಣಕ್ಕಾಗಿ ದೇಶದಲ್ಲಿ ಅನೇಕ ಸಾಧು, ಸಂತರು, ಶರಣರು, ಪವಾಡ ಪುರುಷರು ಜನಿಸಿದ್ದಾರೆ. ಸಮಾಜದಲ್ಲಿ ಮೌಢ್ಯತೆ, ಕಂದಾಚಾರ ತೊಡೆದು ಹಾಕಲು ಶ್ರಮಿಸಿದವರಲ್ಲಿ ಸಂತ ಸೇವಾಲಾಲ್‌ ಕೂಡ ಒಬ್ಬರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಬಂಜಾರರ 160ಕ್ಕೂ ಹೆಚ್ಚು ವೀರರು ಮತ್ತು ಪವಾಡ ಪುರುಷರಲ್ಲಿ ಸೇವಾಲಾಲ್ ಮುಂಚೂಣಿಯಲ್ಲಿದ್ದಾರೆ. ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದರೂ ಸೇವಾ ಮನೋಭಾವದಿಂದ ಸಮುದಾಯದ ರಕ್ಷಣೆಗೆ ನಿಂತ ಮಹನೀಯ ಎಂದು ಸ್ಮರಿಸಿದರು.

ಸಮಾಜದ ಮುಖಂಡ ಅರೂಣ ಚೌಹಾಣ್ ಮಾತನಾಡಿ,‘ದೇಶದ ಮೌಖಿಕ ಚರಿತ್ರೆಯಲ್ಲಿ ಕೆಲ ಪವಾಡ ಪುರುಷರು ಜನಪದ ಕಥೆ ಮತ್ತು ಗಾಯನದಲ್ಲಿ ಉಳಿದಿದ್ದಾರೆ. ತಾಳೆಗರಿಯನ್ನು ತಾಳವನ್ನಾಗಿಸಿ ಹಾಡು ಕಟ್ಟುತ್ತಿದ್ದರು. ಪ್ರಕೃತಿಯಲ್ಲಿನ ಪ್ರಾಣಿ, ಪಕ್ಷಿಗಳೊಂದಿಗೆ ಅವರು ಸಂಭಾಷಣೆ ನಡೆಸುತ್ತಿದ್ದರು ಎಂಬುದು ಪ್ರತೀತಿ. ‌ಅವರೊಬ್ಬ ಸಮಾಜವಾದಿ, ಆರ್ಥಿಕತಜ್ಞ, ವಿಚಾರವಾದಿ, ಸಂಘಟಕ ಎಂದು ಅನೇಕ ಆಯಾಮಗಳಿಂದ ಸಮುದಾಯದ ಜನರು ಗುರುತಿಸುತ್ತಾರೆ. ಪ್ರಸ್ತುತ 144 ದೇಶಗಳಲ್ಲಿ ಬಂಜಾರ ಸಮುದಾಯವಿದೆ’ ಎಂದರು.

ಸಿದ್ದಲಿಂಗ ಸ್ವಾಮೀಜಿ, ಗುರು ಗೋಸಾಯಿಬಾವಾ, ಪಟ್ಟಣ ಪಂಚಾಯಿತಿ ಸದಸ್ಯ ಶಂಭಣ್ಣ ಜೋಳದ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಣ್ಣ ಹೊಸಮನಿ, ಶರಣಪ್ಪ ಈಳಗೇರ, ಅಂದಪ್ಪ ಜವಳಿ, ವೀರಣ್ಣ ಹುಬ್ಬಳ್ಳಿ, ಮಾರುತಿ ಗಾವರಾಳ, ಶಿವುಕುಮಾರ ನಾಗಲಾಪುರಮಠ, ಪಾಂಡುರಂಗ ಪಮ್ಮಾರ, ಭರತ್ ನಾಯ್ಕ, ಲಕ್ಷ್ಮಣ್ಣ ನಾಯ್ಕ, ಕಳಕಪ್ಪ ಕಂಬಳಿ, ರಾಮಣ್ಣ ಭಜೇಂತ್ರಿ, ಸುರೇಶ ಬಳೂಟಗಿ, ಗಣೇಶ ನಾಯ್ಕ, ಹೊಬಣ್ಣ ಚೌಹಾಣ್, ದೇವೆಂದ್ರಪ್ಪ ರಾಠೋಡ, ಧರ್ಮ ನಾಯ್ಕ, ಮೇಘರಾಜ ಬಳಗೇರಿ ಹಾಗೂ ಸೋಮಶೇಖರ್ ನಿಲೋಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.